ಎ.1ರಿಂದ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆ ಸರಳೀಕರಣ?
Team Udayavani, Dec 7, 2018, 3:40 AM IST
ಮುಂದಿನ ಎಪ್ರಿಲ್ 1ರಿಂದ ಜಿಎಸ್ಟಿಗೆ ಸಲ್ಲಿಸುವ ರಿಟರ್ನ್ಸ್ ಫೈಲ್ನಲ್ಲಿ ಸರಳೀಕರಣ ಜಾರಿಗೊಳ್ಳುವ ಸಾಧ್ಯತೆ ಇದೆ ಎಂದು ಐಎಎಸ್ ಅಧಿಕಾರಿ, ದಿಲ್ಲಿ ಜಿಎಸ್ಟಿ ಆಯುಕ್ತ ಮೂಲತಃ ಹಿರಿಯಡಕದವರಾದ ರಾಜೇಶ್ ಪ್ರಸಾದ್ ಅವರು ಹೇಳಿದ್ದಾರೆ. ಸಾಮಾನ್ಯ ಆರ್ಥಿಕ ಹಿನ್ನೆಲೆಯಿಂದ ಬಂದ, ಕಲಿಕೆಯಲ್ಲಿಯೂ ಸಾಮಾನ್ಯ ದರ್ಜೆ ಯವರಾದ ರಾಜೇಶ್ ಪ್ರಸಾದ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಪರಿಶ್ರಮ, ಪ್ರಬಲ ಇಚ್ಛಾಬಲದಿಂದ ಉನ್ನತ ಸ್ತರಕ್ಕೆ ಏರಿದವರು.
ರಿಟರ್ನ್ಸ್ ಫೈಲ್ ಮಾಡುವಾಗ ಸರಳೀಕರಣ ವ್ಯವಸ್ಥೆ ಜಾರಿಗೊಳ್ಳುತ್ತದೆಯೆ?
– ಈಗ ತಿಂಗಳಿಗೆ ಮೂರು ಬಾರಿ ಫೈಲ್ ಮಾಡಬೇಕೆಂದಿದೆ. ಮೊದಲು ಐಟಿ ಸಿಸ್ಟಂ ವಿನ್ಯಾಸ ರೂಪಿಸುವಾಗ ಹೀಗೆ ಇತ್ತು. ಆಗ ಪ್ರಾಯೋಗಿಕ ಅನುಭವವಿರಲಿಲ್ಲ. ಮೂಲ ವಿನ್ಯಾಸವನ್ನು ಸರಿಪಡಿಸುವುದು ಕಷ್ಟವಾದ ಕಾರಣ ತಿಂಗಳಿಗೆ ಒಂದೇ ಬಾರಿ ಫೈಲ್ ಮಾಡಿದರೆ ಸಾಕೆಂಬ ನಿರ್ಧಾರ ತಳೆಯಲಾಗುತ್ತಿದೆ. ಇದನ್ನು ನ್ಯಾಯವಾದಿಗಳು, ವಾಣಿಜ್ಯೋದ್ಯಮಿಗಳು, ಲೆಕ್ಕಪರಿಶೋಧಕರು ಹೀಗೆ ವಿವಿಧ ವರ್ಗಗಳ ಸಲಹೆ ಮೇರೆಗೆ ನಿರ್ಧಾರ ತಳೆಯಲಾಗುತ್ತಿದೆ. ಇದರಂತೆ 5 ಕೋ.ರೂ.ಗಿಂತ ಹೆಚ್ಚು ವಾರ್ಷಿಕ ವ್ಯವಹಾರ ನಡೆಸುವವರು ತಿಂಗಳಿಗೊಮ್ಮೆ ಮತ್ತು ಅದಕ್ಕಿಂತ ಕಡಿಮೆ ವ್ಯವಹಾರದವರು ಮೂರು ತಿಂಗಳಿಗೆ ಒಮ್ಮೆ ಫೈಲ್ ಮಾಡಿದರೆ ಸಾಕು. ಆದರೆ ತೆರಿಗೆಯನ್ನು ಮಾತ್ರ ಪ್ರತಿ ತಿಂಗಳು ಪಾವತಿಸಬೇಕೆಂಬ ನಿಯಮ ಎ. 1ರಿಂದ ಜಾರಿಗೊಳ್ಳುವ ನಿರೀಕ್ಷೆ ಇದೆ.
ಜಿಎಸ್ಟಿ ಸಂಬಂಧಿತ ಸಮಸ್ಯೆ ಬಗೆಹರಿದಿವೆಯೆ?
– ಸುಮಾರು 1 ವರ್ಷ 5 ತಿಂಗಳಿಂದ ಜಿಎಸ್ಟಿ ಬಹುತೇಕ ಸುಲಲಿತವಾಗಿ ನಡೆಯುತ್ತಿದೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ರಿಟರ್ನ್ಸ್ ಫೈಲ್ ಸಲ್ಲಿಸುವಾಗ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ಇವುಗಳನ್ನು ಸರಳೀಕರಣಗೊಳಿಸಬೇಕೆಂಬ ಬೇಡಿಕೆ ಇದೆ.
ಪೆಟ್ರೋಲಿಯಂ ಉತ್ಪನ್ನ ಮತ್ತು ಅಬಕಾರಿಯನ್ನು ಜಿ.ಎಸ್.ಟಿ.ಗೆ ಸೇರಿಸುವ ಪ್ರಸ್ತಾವ ಜಾರಿಯಾದೀತೆ ?
– ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ವ್ಯವಹಾರವನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತಂದರೆ ರಾಜ್ಯ ಸರಕಾರಗಳ ವಿತ್ತೀಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ. ಇದನ್ನು ತರಬೇಕಾದರೆ ಎಲ್ಲ ರಾಜ್ಯಗಳ ಒಪ್ಪಿಗೆ ಬೇಕು. ಅಬಕಾರಿ (ಲಿಕ್ಕರ್) ವ್ಯವಹಾರವನ್ನು ತರಲು ಸಾಧ್ಯವೇ ಇಲ್ಲ. ಇದು ಸಂಪೂರ್ಣವಾಗಿ ರಾಜ್ಯ ವ್ಯಾಪ್ತಿಯಲ್ಲಿದೆ. ಇದು ಆಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು. ಅಬಕಾರಿ ರಾಜ್ಯ ಪಟ್ಟಿಯಲ್ಲಿದ್ದು ಇದನ್ನು ರಾಜ್ಯ ಪಟ್ಟಿಯಿಂದ ತೆಗೆದು ಕೇಂದ್ರದ ಪಟ್ಟಿಗೆ ತರಬೇಕು. ಕೇರಳದಲ್ಲಿ ಆದಂತೆ ತೊಂದರೆ ಸಂಭವಿಸಿದಾಗ ರಾಜ್ಯಗಳಿಗೆ ತೆರಿಗೆ ಹೆಚ್ಚಿಸಲು ಇವೆರಡೂ ಕ್ಷೇತ್ರಗಳು ಅವಕಾಶ ಕಲ್ಪಿಸುತ್ತವೆ. ಆದ್ದರಿಂದ ಇವೆರಡೂ ಸದ್ಯೋಭವಿಷ್ಯದಲ್ಲಿ ಜಿಎಸ್ಟಿ ವ್ಯಾಪ್ತಿಗೆ ಬರುವ ಸಾಧ್ಯತೆ ಇಲ್ಲ.
ಖಾಸಗಿ ವಲಯದಿಂದ ಉನ್ನತ ಹುದ್ದೆಗಳಿಗೆ ನೇಮಿಸಿಕೊಳ್ಳುವ ಕೇಂದ್ರ ಸರಕಾರದ ಕ್ರಮದ ಬಗ್ಗೆ ಅಭಿಪ್ರಾಯವೇನು? ಐಎಎಸ್ ವ್ಯವಸ್ಥೆಗೆ ಭವಿಷ್ಯ?
– ಯಾವುದೇ ಪ್ರತಿಭೆಗಳಿಗೆ ಅವಕಾಶ ಕೊಡುವುದು ಸ್ವಾಗತಾರ್ಹವೇ. ಸದ್ಯ 12 ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಂದಿನ ಬೆಳವಣಿಗೆ ಕುರಿತು ಗೊತ್ತಿಲ್ಲ. ಐಎಎಸ್ಗಳಾಗಲಿ, ರಾಜಕಾರಣಿಗಳಾಗಲಿ ಯಾರೇ ಆಗಲಿ ಬದ ಲಾವಣೆಗೆ ತೆರೆದುಕೊಂಡಿರಬೇಕು. ಹೊಸ ಹೊಸ ಚಿಂತನೆಗಳನ್ನು ಸ್ವಾಗತಿಸಬೇಕು. ಖಾಸಗಿ ವಲಯದವರು ಬರುತ್ತಾರೆಂದ ಮಾತ್ರಕ್ಕೆ ನಾಗರಿಕ ಸೇವಾ ವ್ಯವಸ್ಥೆಗೆ ಬೆದರಿಕೆ ಏನೂ ಇಲ್ಲ. ಒಂದಂತೂ ಸತ್ಯ ಕೇವಲ ಐಎಎಸ್ ವ್ಯವಸ್ಥೆ ಮಾತ್ರ ಬದಲಾದರೆ ಸಾಕಾ ಗದು, ಎಲ್ಲ ವ್ಯವಸ್ಥೆಗಳೂ ಬದಲಾಗಬೇಕು. ಅದಕ್ಕೆ ನೇಮಕಾತಿಯಿಂದ ಹಿಡಿದು ತರಬೇತಿ, ಭಡ್ತಿ ಇತ್ಯಾದಿ ನಾನಾ ಆಯಾಮಗಳಲ್ಲಿ ಸುಧಾರಣೆ ತರಬೇಕು.
ಐಎಎಸ್ ಪರೀಕ್ಷೆ ಕುರಿತು ಕರಾವಳಿ ಕರ್ನಾಟಕದ ಯುವ ಜನರಿಗೆ ಆಸಕ್ತಿ ಕೊರತೆ ಇದೆಯೇ?
– ಕರಾವಳಿ ಕರ್ನಾಟಕದಲ್ಲಿಯೂ ಈಗೀಗ ಜಾಗೃತಿ ಮೂಡುತ್ತಿದೆ. ಅನೇಕ ಯಶಸ್ವೀ ಉದಾಹರಣೆಗಳೂ ಇವೆಯಲ್ಲ? ನಾಗರಿಕ ಪರೀಕ್ಷೆ ಪಾಸಾಗಲು ಮುಖ್ಯವಾಗಿ ಬೇಕಾದದ್ದು ಆಸಕ್ತಿ, ಪ್ರಬಲ ಇಚ್ಛಾಶಕ್ತಿ, ಕಠಿನ ಪರಿಶ್ರಮದ ಓದು. ಇದಕ್ಕೆ ಕೇವಲ ಬುದ್ಧಿವಂತಿಕೆ ಬೇಕೆಂದರ್ಥವಲ್ಲ. ನಾನು ಬಿಕಾಂ ಪದವಿಯನ್ನು ಓದುವಾಗ ಸಾಮಾನ್ಯ ವಿದ್ಯಾರ್ಥಿ. ಅನಂತರ ಜೀವನೋಪಾಯಕ್ಕಾಗಿ ಗೋವಾದಲ್ಲಿ ರೈಲ್ವೇ ಇಲಾಖೆಗೆ ಸೇರಿದೆ. ಆಗ ನಾನು ಸೇರಿದ್ದು ಕ್ಲರ್ಕ್ ಆಗಿ. ಎರಡು ವರ್ಷಗಳಾದ ಬಳಿಕ ವಿಜಯ ಬ್ಯಾಂಕ್, ಬಳಿಕ ಬ್ಯಾಂಕ್ ಆಫ್ ಬರೋಡಕ್ಕೆ ಸೇರಿದೆ. ನಾಗರಿಕ ಪರೀಕ್ಷೆಯನ್ನು ಪಾಸಾಗಲೇಬೇಕೆಂದು ಪಣತೊಟ್ಟು ಓದಿದೆ. ಪಾಸಾದೆ. ಹಸಿವೆ ಆದರೆ ಮಾತ್ರ ಊಟ ಸಿಗುತ್ತದೆ, ರುಚಿಸುತ್ತದೆಯಲ್ಲವೆ? ಮನಸ್ಸಿದ್ದರೆ ಜೀವನವೇ ಶಿಕ್ಷಕ, ಜಗತ್ತೇ ಶಾಲೆ. ನನ್ನೊಡನೆ ಇದ್ದ ಕೆಲವು ಕ್ಲರ್ಕ್ಗಳು ಈಗ ಹೆಡ್ ಕ್ಲರ್ಕ್ ಆಗಿದ್ದಾರೆ. ‘ನಮಡ ಆಪುಜ್ಜಿಯಾ’ ಎಂಬ ಮನಃಸ್ಥಿತಿ ಸರಿಯಲ್ಲ. ಶಿಕ್ಷಕರು, ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಕೊಡಬೇಕು.
— ಸಂದರ್ಶನ: ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ