ಭಾರತೀಯ ಸಂಸ್ಕೃತಿಯಲ್ಲಿ ಭೌತಿಕತೆಯೊಂದಿಗೆ ಆಧ್ಯಾತ್ಮಿಕತೆಯೂ ಅಡಗಿದೆ
Team Udayavani, May 8, 2018, 4:54 PM IST
ಉಡುಪಿ: ವಿದೇಶಿ ಸಂಸ್ಕೃತಿಯಲ್ಲಿ ಕೇವಲ ಭೌತಿಕ ಸುಖಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿ ಅದಕ್ಕೆ ಭಿನ್ನವಾಗಿದ್ದು, ಇದರಲ್ಲಿ ಭೌತಿಕತೆಯೊಂದಿಗೆ ಆಧ್ಯಾತ್ಮಿಕತೆಯೂ ಒಳಗೊಂಡಿದೆ. ಕೇವಲ ದೇಹ ಬೆಳೆಸಿಕೊಂಡರೆ ಸಾಲದು, ದೇಹದಲ್ಲಿ ಆತ್ಮ, ಪರಮಾತ್ಮನೂ ಇದ್ದಾನೆ. ಈ ನೆಲೆಯಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಡೆದ ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ಕ್ಷೇತ್ರದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಹಿಂದೆ ಋಷಿ ಮುನಿಗಳು ತಮ್ಮ ಅಂತಃಚಕ್ಷುವಿನಿಂದ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುತ್ತಿದ್ದರು. ಆದರೆ ಅಂತಃಛಕ್ಷುವಿನಿಂದ ದೇವರನ್ನು ಕಾಣಲಾಗದ ಸಾಮಾನ್ಯ ಮನುಜರಿಗಾಗಿ ದೇಗುಲ, ದೈವಸ್ಥಾನಗಳನ್ನು ನಿರ್ಮಿಸಲಾಗಿದೆ. ಋಷಿ ಮುನಿಗಳು ಹೇಳಿದ ಪ್ರಕಾರ ದೇಗುಲಗಳ ಸಂದರ್ಶನ, ಶ್ರದ್ಧಾ ಭಕ್ತಿಯ ಉಪಾಸನೆಯಿಂದ ದೇವರು ಒಲಿಯುತ್ತಾನೆ. ಈ ಕ್ಷೇತ್ರದಲ್ಲಿ ದಿನನಿತ್ಯ ನಡೆಯುವ ಹೋಮಹವನಾದಿಗಳು, ಅನ್ನಸಂತರ್ಪಣೆ, ಗುರೂಜಿ ಸಾಂತ್ವನ ನುಡಿಯಿಂದ ದೇವಿಯ ಚೈತನ್ಯ ಶಕ್ತಿ ವೃದ್ಧಿಯಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಭಕ್ತರ ಸಂಕಷ್ಟ ನಿವಾರಿಸಿ, ಸಂಕಲ್ಪ ಈಡೇರಿಸುವ ಮೂಲಕ ಕ್ಷೇತ್ರವು ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಹರಿಣಿ ದಾಮೋದರ್ ಶುಭಾಶಂಸನೆಗೈದರು. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಯು. ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
ರಮಾನಂದ ಗುರೂಜಿಯವರನ್ನು ಶ್ರೀಪಾದರು ಗೌರವಿಸಿದರು. ಕೊಡಂಕೂರು ದೇವರಾಜಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ವಂದಿಸಿದರು.
ಧಾರ್ಮಿಕ ಶಿಕ್ಷಣದೊಂದಿಗೆ ಜೀವನ ಧರ್ಮ ಶಿಕ್ಷಣ ನೀಡಿ – ಕೇಮಾರುಶ್ರೀ
ಉಡುಪಿ: ಪ್ರಸ್ತುತ ಮಕ್ಕಳಿಗೆ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಆದರ್ಶರಾಗುತ್ತಿದ್ದಾರೆ. ಅವರಿಗೆ ನಮ್ಮ ಮಹಾನ್ ಗ್ರಂಥಗಳಲ್ಲಿರುವ ಧಾರ್ಮಿಕ ಶಿಕ್ಷಣದೊಂದಿಗೆ ಜೀವನಾನುಭವ ನೀಡುವ ಶಿಕ್ಷಣ ದೊರಕದಿರುವುದೇ ಇದಕ್ಕೆ ಕಾರಣ. ಸಾಧನಾಮಯ ಜೀವನ, ಜ್ಞಾನಾರ್ಜನೆ ನೀತಿ ಪಾಠಗಳನ್ನು ಹೆತ್ತವರು ಕಲಿಸಿಕೊಡಬೇಕೆಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಮಠದ ಶ್ರೀ ಈಶ ವಿಟಲದಾಸ ಸ್ವಾಮೀಜಿ ನುಡಿದರು.
ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಕೆಲವು ಯುವಕರು ಮದ್ಯಪಾನ, ಡ್ರಗ್ಸ್ನಂತಹ ದುಶ್ಚಟಗಳಿಂದ ಹಾಳಾಗುತ್ತಿದ್ದರೆ, ಮಹಿಳೆಯರ ಸಂಸ್ಕೃತಿಯನ್ನು ಧಾರಾವಾಹಿಗಳು ಹಾಳು ಮಾಡುತ್ತಿವೆ. ಮಕ್ಕಳನ್ನು ಮುದ್ದು ಮಾಡಬೇಕು, ಆದರೆ ಅವರು ಕೇಳಿದ್ದೆಲ್ಲವನ್ನೂ ಕೊಡಿಸಿ, ಅವರು ದಾರಿ ತಪ್ಪುವುದಕ್ಕೆ ಅವಕಾಶ ನೀಡಬಾರದು. ಮಕ್ಕಳಿಗೆ ಕೃಷಿ ಬದುಕು, ರಾಷ್ಟ್ರಭಕ್ತಿ, ದೈವೀಭಕ್ತಿಯಂತಹ ವಿಚಾರಧಾರೆಗಳನ್ನು ಧಾರೆ ಎರೆಯಬೇಕು. ದೇಗುಲಗಳು ಆಸ್ತಿಕರಿಗೆ ಮನಃಶಾಂತಿ ನೀಡುವ ತಾಣವಾಗಿರದೆ, ಜ್ಞಾನ ಪ್ರಚಾರ ಮಾಡುವ ಕೇಂದ್ರವೂ ಆಗಬೇಕೆಂದರು.
ಮತದಾನ ಮಾಡಲು ಕರೆ
ಚುನಾವಣೆ ಎಂಬುದು ನಮ್ಮ ರಾಷ್ಟ್ರ ದೇವತೆಯ ಆರಾಧನೆ. ಅದರಲ್ಲಿ ಎಲ್ಲರೂ ಪಾಲ್ಗೊಂಡು, ಸಭ್ಯರನ್ನು ಆರಿಸಿ ಎಂದು ಸ್ವಾಮೀಜಿ ಕರೆ ನೀಡಿದರು.
ಸಮ್ಮಾನ-ಅಭಿನಂದನೆ
ಕ್ಷೇತ್ರದ ತಂತ್ರಿ ಕೃಷ್ಣಮೂರ್ತಿ ತಂತ್ರಿ, ಕ್ಷೇತ್ರದಲ್ಲಿ 11 ವರ್ಷಗಳಿಂದ ನಾದಸ್ವರ ವಾದಕರಾಗಿ ಸೇವೆ ಸಲ್ಲಿಸಿದ ಮುರಳೀಧರ ಮುದ್ರಾಡಿ ಅವರಿಗೆ “ನಾದ ಮುರಳಿ’ ಬಿರುದು, ದಾರುಶಿಲ್ಪಿ ಪೆರಲ್ಕೆ ಜಗದೀಶ ಆಚಾರ್ಯರ ಕಲಾ ಸೇವೆಯನ್ನು ಗುರುತಿಸಿ “ಕಾಷ್ಠಕಲಾ ಪ್ರವೀಣ’ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಕ್ಷೇತ್ರಾಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಶಿಲ್ಪಿ ಸತೀಶ್ ಆಚಾರ್ಯ, ಸುದರ್ಶನ್, ಉಪ್ಪೂರು ಭಾಗ್ಯಲಕ್ಷ್ಮೀ ಸೇರಿದಂತೆ ಮೊದಲಾದವರನ್ನು ಅಭಿನಂದಿಸಲಾಯಿತು.
ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಪಿಪಿಸಿ ನಿವೃತ್ತ ಪ್ರಾಂಶುಪಾಲ ನಟರಾಜ ದೀಕ್ಷಿತ್, ಮೀನಾ ದೇವೇಂದ್ರ, ಸಾಮಾಜಿಕ ಕಾರ್ಯಕರ್ತೆ ರಾಧಾ ರಾಜೇಂದ್ರ ನಾಡರ್ ಮುಂಬಯಿ ಉಪಸ್ಥಿತರಿದ್ದರು.
ರಮಾನಂದ ಗುರೂಜಿ ಅವರನ್ನು ಸ್ವಾಮೀಜಿ ಗೌರವಿಸಿದರು. ಕೊಡಂಕೂರು ದೇವರಾಜಮೂರ್ತಿ ಸ್ವಾಗತಿಸಿ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ನಿರೂಪಿಸಿದರು. ಪ್ರಜ್ಞಾ ಇಂಟರ್ನ್ಯಾಶನಲ್ ಸ್ಕೂಲ್ನ ಪ್ರಾಂಶುಪಾಲೆ ಉಷಾ ರಮಾನಂದ ಸಮ್ಮಾನ ಪತ್ರ ವಾಚಿಸಿದರು. ಆನಂದ ಬಾಯರಿ ವಂದಿಸಿದರು.
ದೇವಿಯಾರಾಧನೆ ಇಡೀ ದೇವಕುಲದ ಆರಾಧನೆ
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶುಕ್ರವಾರ ಆಗಮಿಸಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಪ್ರಶಂಸಿಸಿದರು. ಶ್ರೀ ದುರ್ಗಾ ಆದಿಶಕ್ತಿ ಎಲ್ಲ ಶಕ್ತಿಗಳ ಮೂಲ. ದೇವಿಯು ಶ್ರೀಚಕ್ರಪೀಠ ಸುರಪೂಜಿತೆ. ಆದುದರಿಂದ ಆಕೆಯನ್ನು ಆರಾಧಿಸಿದರೆ ಇಡೀ ದೇವಕುಲವನ್ನೇ ಆರಾಧನೆ ಮಾಡಿದಂತೆ. ತಾಯಿ ಸ್ವರೂಪಳಾದ ಆಕೆಗೆ ನಾವೆಲ್ಲರೂ ಮಕ್ಕಳು. ಆದುದರಿಂದ ನಾವು ಜಗದಂಬೆಯನ್ನು ಆರಾಧಿಸುವವರಾಗಬೇಕೆ ಹೊರತೂ ಜಗಳಗಂಟರಾಗಬಾರದೆಂದು ಶ್ರೀಗಳು ನುಡಿದರು.
ಭವ್ಯ ದೇಗುಲದಲ್ಲಿ ದೇವತಾರಾಧನೆಯೊಂದಿಗೆ ಕಲಾರಾಧನೆಗೂ ಪ್ರಾಧಾನ್ಯ ನೀಡಲಾಗಿದೆ. ದಾರುಶಿಲ್ಪ ವೈಶಿಷ್ಟéಪೂರ್ಣವಾಗಿದೆ. ಭಕ್ತರಿಗೆ ಮನಃಶಾಂತಿ, ಸಾಂತ್ವನ ಹೇಳುವ ರಮಾನಂದರು ಮತ್ತು ಅವರ ಪರಿವಾರಕ್ಕೆ ದೀರ್ಘಾಯುಷ್ಯ ಪ್ರಾಪ್ತಿಯಾಗಲೆಂದು ಹಾರೈಸಿದರು.
ದೊಡ್ಡಣಗುಡ್ಡೆ ಕ್ಷೇತ್ರ: ನಾಗಬ್ರಹ್ಮಮಂಡಲೋತ್ಸವ ಸಂಪನ್ನ
ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶುಕ್ರವಾರ ನಾಗಬ್ರಹ್ಮಮಂಡಲೋತ್ಸವ ಸಂಪನ್ನಗೊಂಡಿತು.
ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇ|ಮೂ| ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ, ನಾಗಪಾತ್ರಿ ಕಲ್ಲಂಗಳ ರಾಮಚಂದ್ರ ಕುಂಜತ್ತಾಯ, ಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ಪಾಲ್ಗೊಂಡಿದ್ದರು.
ಅಂದು ಬೆಳಗ್ಗಿನಿಂದಲೇ ಉಪಾಹಾರ ಆರಂಭಗೊಂಡು, ರಾತ್ರಿ ತನಕವೂ ನಿರಂತರವಾಗಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ನವಶಕ್ತಿ ವೇದಿಕೆಯಲ್ಲಿ ಬಲೇ ತೆಲಿಪಾಲೆ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದ ದೀಪಕ್ ರೈ ಪಾಣಾಜೆ ಮತ್ತು ತಂಡದವರಿಂದ “ತೆಲಿಕೆ ಬಂಜಿ ನಿಲಿಕೆ’ ಹಾಸ್ಯ ಕಾರ್ಯಕ್ರಮ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್