ಶ್ರೀಕೃಷ್ಣ ಮಠಕ್ಕೆ ಕರೆದಿಲ್ಲ , ನಾ ಹೋಗಿಲ್ಲ : ಸಿಎಂ
Team Udayavani, Nov 20, 2017, 10:46 AM IST
ಉಡುಪಿ: ಶ್ರೀಕೃಷ್ಣ ಮಠಕ್ಕೆ ನನ್ನನ್ನು ಯಾರೂ ಕರೆದಿಲ್ಲ; ಆದ್ದರಿಂದ ನಾನು ಹೋಗಿಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ.
ಮುಖ್ಯಮಂತ್ರಿಯಾದ ಬಳಿಕ ಐದು ಬಾರಿ ಉಡುಪಿಗೆ ಬಂದರೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡದ್ದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕೃಷ್ಣ ಹಾಗೂ ಈಶ್ವರನ ಭಕ್ತ. ಹಿಂದೆ ಶ್ರೀಕೃಷ್ಣ ಮಠಕ್ಕೆ ಹೋಗಿದ್ದೆ. ಈಗ ನನ್ನನ್ನು ಯಾರೂ ಕರೆದಿಲ್ಲ. ಉದ್ದೇಶಪೂರ್ವಕ ಭೇಟಿ ನೀಡಿಲ್ಲ ಎನ್ನುವುದು ತಪ್ಪು. ಮಠದೊಂದಿಗೆ ನನಗೆ ಯಾವುದೇ ಮನಸ್ತಾಪವಿಲ್ಲ ಎಂದರು. ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವ ರವರ ನಂಬಿಕೆಗೆ ಬಿಟ್ಟದ್ದು. ದೇವರೊಬ್ಬನೇ ಇರು ವುದು ಎಂದು ಹೇಳಿದ ಅವರು, ಬಸವಣ್ಣನವರ “ಉಳ್ಳ ವರು ಶಿವಾಲಯವ ಮಾಡುವರು ನಾನೇನು ಮಾಡ ಲಯ್ನಾ… ಎನ್ನುವ ಸಾಲನ್ನು ಹಾಡಿದರು.
ಮಸೂದೆ: ಬಡರೋಗಿಗಳು ಗೆದ್ದಿದ್ದಾರೆ
ವೈದ್ಯಕೀಯ ಮಸೂದೆಗೆ ತಿದ್ದುಪಡಿ ಮಾಡಿರು ವುದು ಖಾಸಗಿ ವೈದ್ಯರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಲ್ಲ; ಬಡರೋಗಿಗಳ ಅನುಕೂಲ ಕ್ಕಾಗಿ ಮಾಡಿದ್ದು. ವೈದ್ಯರು ತಪ್ಪು ತಿಳಿವಳಿಕೆಯಿಂದ ಮುಷ್ಕರ ನಡೆಸಿದ್ದಾರೆ. ಅವರಿಗೆ ಕಾಯ್ದೆಯನ್ನು ಮನವರಿಕೆ ಮಾಡಲಾಗಿದೆ. ಇಲ್ಲಿ ಗೆದ್ದಿರುವುದು ಬಡರೋಗಿಗಳು ಎಂದರು.
ಆಸ್ಪತ್ರೆ ಸರಕಾರದ್ದೆ
ಉಡುಪಿಯಲ್ಲಿ ಈಗ ಆಗಿರುವ 200 ಬೆಡ್ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿ ಯವರಿಗೆ ಕೊಟ್ಟಿಲ್ಲ. ಸರಕಾರದ ಸುಪರ್ದಿಯಲ್ಲೇ ಆಸ್ಪತ್ರೆ ಇರುತ್ತದೆ. ಖಾಸಗಿಯವರು ನೋಡಿಕೊಳ್ಳು ತ್ತಾರೆ ಅಷ್ಟೆ ಎಂದರು.
ಮದ್ಯ ನಿಷೇಧ: ಪ್ರಸ್ತಾವ ಇಲ್ಲ
ರಾಜ್ಯ ಸರಕಾರ ಮದ್ಯ ನಿಷೇಧಿಸಲು ಚಿಂತನೆ ನಡೆಸಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ ಅಂತಹ ಪ್ರಸ್ತಾವ ಸರಕಾರದ ಮುಂದೆ ಇಲ್ಲವೇ ಇಲ್ಲ ಎಂದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಅವರು ಮುಖ್ಯಮಂತ್ರಿಯವರನ್ನು ಸ್ವಾಗತಿಸಿದರು. ಸಚಿವರಾದ ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ಪ್ರಮೋದ್ ಮಧ್ವರಾಜ್, ಶಾಸಕ ರಾದ ಐವನ್ ಡಿ’ಸೋಜಾ, ವಿನಯ ಕುಮಾರ್ ಸೊರಕೆ, ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಡಾ| ಬಿ.ಆರ್. ಶೆಟ್ಟಿ, ಡಾ| ಜಿ. ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್ ಮತ್ತಿತರರು ಇದ್ದರು.