ಶ್ರೀಕೃಷ್ಣಮಠದ ಸುವರ್ಣಗೋಪುರ ಸಮರ್ಪಣ
Team Udayavani, Jun 9, 2019, 6:00 AM IST
ಶ್ರೀಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಗೋಪುರ ನಿರ್ಮಾಣದ ಸಮರ್ಪಣೋತ್ಸವ ಅಂತಿಮ ಘಟಕ್ಕೆ ಬಂದಿದೆ. ಜೂ. 9ರಂದು ಶ್ರೀಕೃಷ್ಣನಿಗೆ 108 ಕಲಶಾಭಿಷೇಕ ನಡೆಸುವ ಮೂಲಕ ಯೋಜನೆ ಕೃಷ್ಣಾರ್ಪಣ ಎನಿಸಲಿದೆ.
ವೈಭವದ ಸಂಕೇತವಲ್ಲ, ಭಕ್ತಿಯ ಸಂಕೇತ
ಸುವರ್ಣ ಗೋಪುರ ವೈಭವದ, ಆಡಂಬರದ ಸಂಕೇತವೂ ಅಲ್ಲ, ಇದು ಭಕ್ತಿಯ ಸಂಕೇತ. ಭಕ್ತಿಯನ್ನು ಹಿಡಿದುಕೊಂಡು ಏನು ಮಾಡಬಹುದು ಎಂದು ಕೆಲವರು ಹೇಳಬಹುದು. ವಾಸ್ತವ ವಿಷಯವೆಂದರೆ ಮಠ, ಮಂದಿರಗಳ ಇಂತಹ ಸಂಪತ್ತು ಮುಂದೆ ಎಂದಾದರೂ ಒಂದು ದಿನ ಕ್ಷಾಮಾದಿಗಳು, ಸಮಸ್ಯೆ, ವಿತ್ತೀಯ ಕೊರತೆ ಬಂದರೆ ಇದನ್ನು ಬಳಸಬಹುದು. ಇದಕ್ಕೆ ಉದಾಹರಣೆಯನ್ನು ನಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರು ಹೇಳುತ್ತಿದ್ದರು. ಅವರು ಶ್ರೀಭಂಡಾರಕೇರಿ ಮಠಾಧೀಶರಾಗಿದ್ದಾಗ ಶ್ರೀಉತ್ತರಾದಿ ಮಠದ ಶ್ರೀಸತ್ಯಧ್ಯಾನತೀರ್ಥರಲ್ಲಿ ಓದುತ್ತಿದ್ದರು. ಇದು 1940ರ ದಶಕದ ಕಾಲ. ಆಗ ವಿಪರೀತ ಬರ ಬಂದಿತ್ತು. ಶ್ರೀಸತ್ಯಧ್ಯಾನತೀರ್ಥರು ತಮ್ಮ ಮಠದ ವಜ್ರ, ಚಿನ್ನದ ಮಂಟಪವನ್ನು ಒತ್ತೆ ಇರಿಸಿ ವಿಜಯಪುರದಲ್ಲಿ ತಿಂಗಳುಗಟ್ಟಲೆ ಜಾತಿಮತ ಭೇದವಿಲ್ಲದೆ, ಭಿಕ್ಷುಕರೂ ಸೇರಿದಂತೆ ಸಾರ್ವಜನಿಕರಿಗೆ ಊಟ ಹಾಕಿಸಿದ್ದರು. ಶ್ರೀವಾದಿರಾಜಸ್ವಾಮಿಗಳು ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಿಧಿ ಇರಿಸಿದ್ದೂ ಇದೇ ಉದ್ದೇಶಕ್ಕೆ. ಸುವರ್ಣಗೋಪುರದ ಚಿನ್ನ, ಬೆಳ್ಳಿ ಎಲ್ಲವೂ ಸಾರ್ವಜನಿಕ, ರಾಷ್ಟ್ರದ ಆಸ್ತಿ. ಹತ್ತು ಸಮಸ್ತರ ದೇಣಿಗೆ ಬಂತೆಂದರೆ ಅದು ರಾಷ್ಟ್ರದ, ಸಾರ್ವಜನಿಕರ ಸಂಪತ್ತು. ಬರಗಾಲ ಬರಬಾರದೆಂಬುದೇ ನಮ್ಮೆಲ್ಲರ ಆಶಯ. ಆದರೂ ಭವಿಷ್ಯದಲ್ಲಿ ಬರಗಾಲ ಬಂದರೆ, ವಿತ್ತೀಯ ಕೊರತೆ ಎದುರಾದರೆ ಈ ರಾಷ್ಟ್ರದ ಸಂಪತ್ತಾದ ಚಿನ್ನ, ಬೆಳ್ಳಿಯನ್ನು ಬಳಸಬಹುದು. ಅಂತಹ ಕಾಲ ಬರಬಾರದು, ಸಾರ್ವಜನಿಕ ಆಸ್ತಿಯಾಗಿಯೇ ಉಳಿಯಬೇಕೆಂದು ಹಾರೈಸುತ್ತೇವೆ.
20 ಸಾವಿರ ಟಂಕೆ
ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಒಟ್ಟು 1,500 ಕೆ.ಜಿ. ತಾಮ್ರವಿದ್ದು ಜೀರ್ಣವಾದ ತಾಮ್ರದ ತಗಡಿನಿಂದ ಕೃಷ್ಣ ಮತ್ತು ರಾಮನ ಚಿತ್ರವಿರುವ ಟಂಕೆಯನ್ನು ತಯಾರಿಸಲಾಗಿದೆ. ಇದರಲ್ಲಿ ಕೃಷ್ಣನ ವಿಗ್ರಹದ ಟಂಕೆಗಳು ಹೆಚ್ಚು. ಸುಮಾರು 20,000 ಟಂಕೆಗಳನ್ನು ಸಹಾಯ ಮಾಡಿರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುವುದು. ಶೇ.20ರಷ್ಟು ಚಿನ್ನದ ಕೊರತೆ ಇದ್ದು ಇದು ಪರ್ಯಾಯ ಅವಧಿಯೊಳಗೆ ಸಂಗ್ರಹವಾಗುತ್ತದೆ ಎಂಬ ವಿಶ್ವಾಸವಿದೆ. ಒಂದು ಬಾರಿ ಕೊಟ್ಟವರು ತಮಗಾದ ಅನುಭವದಿಂದ ಮತ್ತೆ ಕೊಟ್ಟವರೂ ಇದ್ದಾರೆ.
ಸುವರ್ಣಗೋಪುರ ಶಿಖರಾಭಿಷೇಕ
ಜೂ. 6ರಂದು ಸುವರ್ಣಗೋಪುರದ ಪ್ರತಿಷ್ಠಾಪನೆ, ಶಿಖರಾಭಿಷೇಕವು 88ರ ಹರೆಯದ ಪೇಜಾವರ ಹಿರಿಯ ಸ್ವಾಮೀಜಿಯಿಂದ ಹಿಡಿದು 20ರ ಹರೆಯದ ಪಲಿಮಾರು ಕಿರಿಯ ಸ್ವಾಮೀಜಿಯವರೆಗೆ ವಿವಿಧ ಮಠಾಧೀಶರಿಂದ ನಡೆಯಿತು. ವಿವಿಧ ದಿನಗಳಲ್ಲಿ ದೇಸೀ ಗೋವುಗಳ ಸಮ್ಮೇಲನ, ಮಹಿಳಾ ಸಮ್ಮೇಳನ, ದಾಸ ಸಾಹಿತ್ಯ ಗೋಷ್ಠಿ, ಚಿಂತನ ಗೋಷ್ಠಿ, ವಿಜ್ಞಾನಗೋಷ್ಠಿ, ಪರಿಸರ ದಿನಾಚರಣೆ, ವಿಶೇಷ ಭಜನೆ, ವಿವಿಧ ರಾಜರುಗಳ ಭೇಟಿ, ಧಾರ್ಮಿಕಗೋಷ್ಠಿಗಳು ಸಂಪನ್ನಗೊಂಡವು.
6 ತಿಂಗಳು ಕೆಲಸ
ಸಮಗ್ರ ಕೆಲಸದ ಉಸ್ತುವಾರಿಯನ್ನು ವಹಿಸಿಕೊಂಡವರು ಯು. ವೆಂಕಟೇಶ್ ಶೇಟ್. ಸುರೇಶ್ ಶೇಟ್ ಅವರ ನೇತೃತ್ವ ದಲ್ಲಿ ವಿವಿಧ ಕೆಲಸಗಳು ನಡೆದವು. ಬಂಟಕಲ್ಲು ಗಣಪತಿ ಆಚಾರ್ಯ ಮತ್ತು ಪರ್ಕಳ ನಾಗರಾಜ ಶರ್ಮರ ತಂಡ ಚಿನ್ನದ ಕೆಲಸವನ್ನು ನಿರ್ವಹಿಸಿದೆ. ಹಿರಿಯಡಕ ಗಣೇಶ ಆಚಾರ್ಯರ ತಂಡ ಮರದ ಕೆಲಸಗಳನ್ನು ನಿರ್ವಹಿಸಿದೆ. ಚಿನ್ನ, ಬೆಳ್ಳಿ, ಮರದ ಕೆಲಸಕ್ಕೆ ಸುಮಾರು ಆರು ತಿಂಗಳು ತಗುಲಿದೆ. ಮರದ ಕೆಲಸವನ್ನು 26 ಜನರು, ಲೋಹದ ಕೆಲಸವನ್ನು 33 ಜನ ಕುಶಲಕರ್ಮಿಗಳು ನಿರ್ವಹಿಸಿದ್ದಾರೆ. ಹಿಂದೆ ಇದ್ದ ಉತ್ತಮ ಮರದ ತೊಲೆಗಳನ್ನು ಹಾಗೆಯೇ ಬಳಸಲಾಗಿದೆ. ಉಳಿದ ಹಲಗೆಯನ್ನು ಗರ್ಭಗುಡಿಯ ಒಳಗೆ ಮೇಲೆ ಮತ್ತು ಕೆಳಗೆ ಎರಡು ಪದರಗಳಲ್ಲಿ ಅಳವಡಿಸಲಾಗಿದೆ.
ಸುವರ್ಣ ಗೋಪುರ
2018ರ ಜನವರಿ 18ರಂದು ಪರ್ಯಾಯ ಪೀಠಾರೋಹಣ ಮಾಡುವ ಮೊದಲೇ ಸುವರ್ಣಗೋಪುರ ಸಂಕಲ್ಪವನ್ನು ಶ್ರೀಪಲಿಮಾರು ಶ್ರೀಗಳು ತೊಟ್ಟಿದ್ದರು. ಅದರಂತೆ ಗೋಪುರಕ್ಕೆ ಒಟ್ಟು 4,000 ಚಿನ್ನದ ಹಾಳೆಗಳಿಂದ ಮಾಡು ರಚಿಸಲಾಗಿದೆ. 100 ಕೆ.ಜಿ. ಚಿನ್ನ, 900 ಕೆ.ಜಿ. ಬೆಳ್ಳಿ, 300 ಕೆ.ಜಿ. ತಾಮ್ರದ ಫಲಕಗಳಿಂದ ಗೋಪುರವನ್ನು ನಿರ್ಮಿಸಲಾಗಿದೆ. ಸುಮಾರು 700 ಸಿಎಫ್ಟಿ ಸಾಗುವಾನಿ ಮರವನ್ನು ಬಳಸಲಾಗುತ್ತಿದೆ. ಒಟ್ಟು 2,500 ಚದರಡಿ ವಿಸ್ತೀರ್ಣದಲ್ಲಿ ಸುವರ್ಣ ಗೋಪುರ ನಿಂತಿದೆ.
100 ಕೆ.ಜಿ. ಚಿನ್ನ
900 ಕೆ.ಜಿ. ಬೆಳ್ಳಿ
300 ಕೆ.ಜಿ. ತಾಮ್ರ
4000 ಚಿನ್ನದ ಹಾಳೆಗಳು
700 ಸಿಎಫ್ಟಿ ಸಾಗುವಾನಿ ಬಳಕೆ
2500 ಸುವರ್ಣ ಗೋಪುರದ
ಒಟ್ಟು ಚದರಡಿ ವಿಸ್ತೀರ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ