ಋಣಮುಕ್ತ ಕಾಯ್ದೆಗೆ ಸಾವಿರ ಜನ ಸಾಲು!
ಜನಸಾಗರದಿಂದ ತುಂಬಿದ ಮಿನಿ ವಿಧಾನಸೌಧ ; ಅರ್ಜಿ ಬರೆಸಲು ಕಿಕ್ಕಿರಿದ ಅಂಗಡಿಗಳು ; ಮಾಹಿತಿ ಕೊರತೆಯಿಂದ ಜನಸಾಗರ
Team Udayavani, Oct 21, 2019, 11:12 PM IST
ಕುಂದಾಪುರ: ರಾಜ್ಯದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಜಾರಿಗೆ ತಂದ ಋಣಮುಕ್ತ ಕಾಯ್ದೆಗೆ ಅರ್ಜಿ ಸಲ್ಲಿಸಲು ಸೋಮವಾರ ಸಾವಿರಾರು ಮಂದಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಜಮಾಯಿಸಿದ್ದರು.
1 ವಾರದಿಂದ ಜನ
ಕಳೆದ ಒಂದು ವಾರದಿಂದ ಜನ ಭರಪೂರ ಹರಿದು ಬರುತ್ತಿದ್ದು ಜನರಿಗೆ ಮಾಹಿತಿ ಕೊರತೆಯಿಂದಾಗಿ ಅನಗತ್ಯ ಬರುವಿಕೆಯಾಗಿದೆ. ಮಧ್ಯವರ್ತಿಗಳು ಇವರ ಬಳಿ ಸಾಲ ಕಟ್ಟದಂತೆ ಮಾಡಿಕೊಡುತ್ತೇವೆ ಎಂದು ಹಣ ಸೆಳೆಯುತ್ತಿದ್ದಾರೆ. ಅರ್ಜಿ ಬರೆದು ಕೊಡಲು 30ರಿಂದ 100 ರೂ.ವರೆಗೆ ಪಡೆಯುತ್ತಿದ್ದಾರೆ.
ಎಲ್ಲರಿಂದಲೂ ಅರ್ಜಿ
ಬೇರೆ ಬೇರೆಡೆಯಿಂದ
ವಿದ್ಯಾವಂತರು ಅವಿದ್ಯಾವಂತರು ಎಂದು ಭೇದವಿಲ್ಲದೇ ಎಲ್ಲರು ಬಂದಿದ್ದು ಮಾಹಿತಿಯ ಕೊರತೆಯಿಂದ ಹೀಗಾಗಿದೆ. ನೊಂದಾಯಿತ ಸಂಸ್ಥೆಗಳ ಸಾಲ ಮನ್ನಾ ಇಲ್ಲ ಎಂದು ಮಾಹಿತಿ ಇರುತ್ತಿದ್ದರೆ ಬರುತ್ತಿರಲಿಲ್ಲ ಎಂದು ನೇತ್ರಾವತಿ ಅವರು ಹೇಳಿದರು. ಗುಜ್ಜಾಡ, ಪಡುಬಿದ್ರೆ, ಕಾಪು, ಗಂಗೊಳ್ಳಿ, ಬೈಂದೂರು, ಗೋಳಿಯಂಗಡಿ ಮೊದಲಾದೆಡೆಯಿಂದ ಕುಂದಾಪುರ ಎಸಿ ಕಚೇರಿಗೆ ಜನ ಬರುತ್ತಿದ್ದಾರೆ.
ಜನಜಾತ್ರೆ
ಮಕ್ಕಳು ಮಹಿಳೆಯರು ಎಂದು ಬಂದ ಕಾರಣ ಸ್ಥಳಾವಕಾಶದ ಕೊರತೆಯಾಯಿತು. ಇದರಿಂದ ಅಲ್ಲಲ್ಲಿ ಕುಳಿತು ಮಕ್ಕಳನ್ನು ಸಮಾಧಾನ ಪಡಿಸುತ್ತಿದ್ದರು. ಮಕ್ಕಳಿಗೆ ತಿಂಡಿ ತಿನಸು ನೀಡುತ್ತಿದ್ದರು. ಹತ್ತಾರು ಅಂಗಡಿಗಳ ಮುಂದೆ ಝೆರಾಕ್ಸ್ ಪ್ರತಿಗಾಗಿ, ಅರ್ಜಿ ಪ್ರತಿಗಾಗಿ, ಅರ್ಜಿ ಬರೆದುಕೊಡಿ ಎಂದು ನೂರಾರು ಜನ ಜಮಾಯಿಸಿದ್ದರು. ಒಟ್ಟಿನಲ್ಲಿ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧವರೆಗೆ ಜನಜಾತ್ರೆಯೇ ಸೇರಿತ್ತು. ವಾಹನಗಳ ಓಡಾಟಕ್ಕೂ ತೊಂದರೆಯಾಗುವಂತೆ ಜನ ಸೇರಿತ್ತು.