ಉಡುಪಿ ಜಿಲ್ಲೆಯ ದಾಖಲೆ: ಏಕಕಾಲದಲ್ಲಿ ಸಚಿವದ್ವಯರು
Team Udayavani, Aug 5, 2021, 7:30 AM IST
ಉಡುಪಿ: ಉಡುಪಿ ಜಿಲ್ಲೆ 1997ರಲ್ಲಿ ಉದಯವಾದ ಬಳಿಕ ಇದೇ ಮೊದಲ ಬಾರಿ ಏಕಕಾಲದಲ್ಲಿ ಜಿಲ್ಲೆಯ ಇಬ್ಬರಿಗೆ ಸಚಿವ ಹುದ್ದೆ ಸಿಕ್ಕಿದೆ.
ಉಡುಪಿ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರರು ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜಿಲ್ಲೆಯಾಗುವ ಮುನ್ನ:
ಉಡುಪಿ ಜಿಲ್ಲೆ ಆರಂಭವಾಗುವ ಮುನ್ನ ಈಗಿನ ಉಡುಪಿ ಜಿಲ್ಲೆ ವ್ಯಾಪ್ತಿಯ ಉಡುಪಿ ಶಾಸಕಿ ಮನೋರಮಾ ಮಧ್ವರಾಜ್ ಮತ್ತು ಕಾರ್ಕಳದ ಶಾಸಕ ಎಂ.ವೀರಪ್ಪ ಮೊಲಿ ಏಕಕಾಲದಲ್ಲಿ ಮೂರು ಬಾರಿ ಸಚಿವರಾಗಿದ್ದರು.
ಮದ್ರಾಸ್ ರಾಜ್ಯದಲ್ಲಿ :
1949ರಿಂದ 56ರ ವರೆಗೆ ಕರ್ನಾಟಕದ ಕರಾವಳಿ ಪ್ರದೇಶ ಮದ್ರಾಸ್ ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಅತ್ತಾವರ ಬಾಲಕೃಷ್ಣ ಶೆಟ್ಟಿಯವರು ಕೃಷಿ, ಪಶುಸಂಗೋಪನೆ, ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ಸಹಕಾರ, ವಸತಿ, ಮಾಜಿ ಸೈನಿಕರ ಇಲಾಖೆಯ ಸಚಿವರಾಗಿದ್ದರು.
ಜಿಲ್ಲೆಯಾದ ಬಳಿಕ:
ಉಡುಪಿ ಜಿಲ್ಲೆ ಉದಯವಾಗುವಾಗ ಜಯಪ್ರಕಾಶ ಹೆಗ್ಡೆ ಸಚಿವರಾಗಿದ್ದರೆ, ಅನಂತರ ವಸಂತ ಸಾಲ್ಯಾನ್, ಡಾ| ವಿ.ಎಸ್.ಆಚಾರ್ಯ, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕೋಟ ಶ್ರೀನಿವಾಸ ಪೂಜಾರಿ ಇಲ್ಲಿಯವರೆಗೆ ಸಚಿವರಾಗಿದ್ದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕುಂದಾಪುರ ಮತ್ತು ಬೈಂದೂರಿನ ಶಾಸಕರಿಗೆ ಒಂದು ಬಾರಿಯೂ ಸಚಿವ ಹುದ್ದೆ ಸಿಕ್ಕಿಲ್ಲ. ವಿಧಾನ ಪರಿಷತ್ ನೆಲೆಯಲ್ಲಿ ಕುಂದಾಪುರದ ಪ್ರತಾಪಚಂದ್ರ ಶೆಟ್ಟಿಯವರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಸಿಕ್ಕಿತ್ತು.
ರಜತೋತ್ಸವಕ್ಕೆ ಇಬ್ಬರು?:
ಜಿಲ್ಲೆಯಾಗುವ ಮುನ್ನ ಇಬ್ಬರು ಸಚಿವರು ಏಕಕಾಲದಲ್ಲಿದ್ದರೆ, ಜಿಲ್ಲೆಯಾದ ಬಳಿಕ 25ನೆಯ ವರ್ಷ ಸಮೀಪಿಸುತ್ತಿರುವಾಗ ಇಬ್ಬರು ಸಚಿವರು ಏಕಕಾಲದಲ್ಲಿ ಮೊದಲ ಬಾರಿ ನೇಮಕಗೊಂಡಿದ್ದಾರೆ. ಜಿಲ್ಲೆಯ ಇಬ್ಬರು ಸಚಿವರಾದದ್ದಲ್ಲದೇ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಿಂದಾಗಿ ಇತರ ಪ್ರಬಲ ಸಮುದಾಯಗಳಿಗೆ ಹೋಲಿಸಿದಾಗ ಅಸಮತೋಲನ ಕಂಡುಬರುತ್ತದೆ. ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನ ಪರಿಷತ್ನ ಸಭಾ ನಾಯಕರ ಕೋಟಾದಲ್ಲಿ ಸಚಿವರಾದರೆ, ಸುನಿಲ್ ಕುಮಾರ್ ಉಡುಪಿ ಜಿಲ್ಲೆಯ ವಿಧಾನಸಭೆ ಸದಸ್ಯರನ್ನು ಪ್ರತಿನಿಧಿಸುತ್ತಿದ್ದಾರೆ.