ಉಚ್ಚಿಲ ವಾರದ ಸಂತೆ: ಹೆದ್ದಾರಿಯಲ್ಲಿ ಅಪಾಯದ ಹೆಬ್ಟಾಗಿಲು
Team Udayavani, Apr 2, 2019, 6:30 AM IST
ಪಡುಬಿದ್ರಿ: ಪ್ರತಿ ಸೋಮವಾರ ಉಚ್ಚಿಲದಲ್ಲಿ ನಡೆಯುವ ವಾರದ ಸಂತೆಯು ಹೆದ್ದಾರಿಯನ್ನೇ ನುಂಗುತ್ತಾ ಸಾಗುತ್ತಿದೆ. ಇದು ಹೆದ್ದಾರಿ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಹಾಗೂ ಅಲ್ಲಿ ಸಂಚರಿಸುವ ವಾಹನ ಸವಾರರಿಗೂ ಅಪಾಯವನ್ನು ಒಡ್ಡುವ ಭೀತಿ ಎದುರಾಗಿದೆ.
ಉಚ್ಚಿಲ ಸುತ್ತಮುತ್ತಲಲ್ಲಿ ಹಳ್ಳಿಗಳೇ ಇರುವುದರಿಂದ ತಮ್ಮ ವಾರದ ಆಹಾರ ಪದಾರ್ಥಗಳಿಗಾಗಿ ವಾರದ ಸಂತೆಯನ್ನೇ ನೆಚ್ಚಿಕೊಂಡವರಿದ್ದಾರೆ. ಹಾಗಾಗಿ ಎಲ್ಲರೂ ಉಚ್ಚಿಲ ಪೇಟೆಗೆ ಬರುವಾಗ ಸಂತೆಯ ಸ್ಥಳವೂ ಬಹಳಷ್ಟು ಇಕ್ಕಟ್ಟಾಗಿರುವುದರಿಂದ ವ್ಯಾಪಾರಗಳು ಹೆದ್ದಾರಿ ಬದಿಯಲ್ಲೇ ನಡೆಯುತ್ತವೆ.
ಹೆದ್ದಾರಿ ಬದಿ ಯರ್ರಾಬಿರ್ರಿ ವಾಹನ ನಿಲುಗಡೆ: ಪ್ರವೇಶ
ಸಂತೆಗೆ ಬರುವವರೂ ತಮ್ಮ ವಾಹನಗಳನ್ನು ಹೆದ್ದಾರಿ ಬದಿಯಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಮತ್ತು ವಿರುದ್ಧ ದಿಕ್ಕಿನಿಂದ ಬರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪಾದಚಾರಿಗಳಿಗೆ ರಸ್ತೆ ದಾಟಲೂ ತೊಂದರೆಗಳುಂಟಾಗುತ್ತಿವೆ. ದ್ವಿಚಕ್ರ ಸವಾರರು ಯರ್ರಾಬಿರ್ರಿಯಾಗಿ ಹೆದ್ದಾರಿ ಪ್ರವೇಶಿಸುತ್ತಾರೆ. ಈ ನಡುವೆ ಹೆದ್ದಾರಿ ವಾಹನಗಳು 100ಕಿಮೀ.ಗೂ ವೇಗದ ಸ್ಥಿತಿಯಲ್ಲಿ ಇರುವುದರಿಂದ ಈ ವೇಳೆ ಇಲ್ಲಿ ಪೊಲೀಸ್ ಸೇವೆ ಅತ್ಯಗತ್ಯವಾಗಿದೆ.
ಹಳೆಯ ಮಿನು ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ
ಸಂತೆ ಮಾರುಕಟ್ಟೆ ಸಮೀಪವೇ ಹಳೆಯ ಮೀನುಮಾರುಕಟ್ಟೆಯೂ ಉಚ್ಚಿಲದಲ್ಲಿದೆ. ಕೇವಲ ಒಂದಿಬ್ಬರಿಗೆ ಇಲ್ಲಿ ಕೂತು ಮೀನು ಮಾರಾಟ ಮಾಡುವ ಅವಕಾಶವಿದ್ದು ಮಿಕ್ಕವರು ಹೆದ್ದಾರಿಯಲ್ಲೇ ಮೀನು ಮಾರಾಟವನ್ನು ನಡೆಸುತ್ತಾರೆ. ಮೀನಿನ ನೀರೂ ಇಲ್ಲಿ ಹೆದ್ದಾರಿ ಪಕ್ಕದಲ್ಲೇ ಹರಿಯುವುದರಿಂದ ಹೆದ್ದಾರಿಯಲ್ಲಿ ಬಸ್ಗಾಗಿ ಕಾಯು
ವವರೂ ತೊಂದರೆಗೊಳಗಾಗುತ್ತಿದ್ದಾರೆ.
ಹಾಗಾಗಿ ಮೀನು ಮಾರುಕಟ್ಟೆ ಮತ್ತು ವಾರದ ಸಂತೆಯನ್ನು ಉಚ್ಚಿಲದಲ್ಲಿ ವಿಶಾಲ ಸ್ಥಳಾವಕಾಶವಿರುವಲ್ಲಿಗೆ
ಸ್ಥಳಾಂತರಿಸಬೇಕು ಎನ್ನುವುದೂ ಸ್ಥಳೀಯರ ಆಶಯವಾಗಿದೆ.
ವಾರದ ಸಂತೆಯ ಗೊಂದಲ, ವಾಹನ ಸವಾರರು, ಪಾದಚಾರಿಗಳಿಗೆ
ಸದಾ ಅಪಾಯದ ಭಯಗಳಿಂದ ಮುಕ್ತಿಗಳಿಗಾಗಿ ಸಂತೆಮತ್ತು ಸುಸಜ್ಜಿತ ಮೀನು ಮಾರುಕಟ್ಟೆಯ ನಿರ್ಮಾಣವು ಉಚ್ಚಿಲದಲ್ಲಿ ಬೇರೆಡೆ ಆಗಬೇಕಿದೆ ಎನ್ನುವುದು ಉಚ್ಚಿಲ ಪೊಲ್ಯ ನಿವಾಸಿ ಅಬ್ದುಲ್ ಕರೀಮ್
ಅಭಿಮತವಾಗಿದೆ.
ಕಾಪುವಿನಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಬಡಾ ಗ್ರಾ. ಪಂ. ಉಚ್ಚಿಲದ ಪಿಡಿಒ ಕುಶಾಲಿನಿ ಅವರು ಈಗಾಗಲೇ ಬಡಾ ಗ್ರಾ. ಪಂ. ಗೂ ಈ ಕುರಿತಾದ ದೂರುಗಳು ಬಂದಿದ್ದು ಈಗಾಗಲೇ ಹೆದ್ದಾರಿಗೆ ಸೂಚಿತವಾದ ಜಾಗವನ್ನು ಬಿಟ್ಟು ಉಳಿದಂತೆ ಇರುವ ಬೇರೆಯೇ ಜಾಗದಲ್ಲಿ ಮೀನು ಮಾರುಕಟ್ಟೆಯನ್ನೂ, ವಾರದ ಸಂತೆಯನ್ನೂ ಸ್ಥಳಾಂತರಿಸುವ ಯೋಚನೆಗಳನ್ನು ಗ್ರಾ. ಪಂ. ಮಾಡುತ್ತಿದೆ. ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ಮೀನುಗಾರಿಕಾ ಇಲಾಖಾ ಅನುದಾನಕ್ಕೂ ಬರೆದುಕೊಳ್ಳಲಾಗಿದೆ ಎಂದಿದ್ದಾರೆ.