ಉಡುಪಿ: 4 ಹೆಚ್ಚುವರಿ ಕಟಾವು ಯಂತ್ರಕ್ಕೆ ಕೃಷಿ ಇಲಾಖೆ ಪ್ರಸ್ತಾವನೆ
Team Udayavani, Jul 20, 2022, 1:07 AM IST
ಉಡುಪಿ: ಕರಾವಳಿ ಯಾದ್ಯಂತ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಇಲ್ಲಿ ಭತ್ತ ಪ್ರಧಾನ ಕೃಷಿಯಾಗಿದ್ದು, ಕಟಾವಿಗೆ ಬರುತ್ತಿ ದ್ದಂತೆ ಕೃಷಿ ಯಂತ್ರಗಳ ಬಾಡಿಗೆಯೂ ಗಗನಕ್ಕೆ ಏರುತ್ತದೆ.
ಗ್ರಾಮೀಣ ಭಾಗದಲ್ಲೂ ಕಟಾವಿಗೆ ಜನ ಸಿಗದಿರುವುದು ಮತ್ತು ಸಂಸ್ಕರಣೆಯೂ ಸುಲಭವಾಗುವುದರಿಂದ ಬಹುತೇಕರು ಯಂತ್ರದ ಮೂಲಕವೇ ಕಟಾವು ಮಾಡುತ್ತಿದ್ದಾರೆ.
ಯಂತ್ರಗಳ ಕೊರತೆಯಾದಾಗ ಅನಿವಾರ್ಯವಾಗಿ ದುಬಾರಿ ಬಾಡಿಗೆ ತೆರಬೇಕಾಗುತ್ತದೆ. ಖಾಸಗಿ ವ್ಯಕ್ತಿಗಳ ಕಟಾವು ಯಂತ್ರದ ಬಾಡಿಗೆಯು ಗಂಟೆಗಳ ಲೆಕ್ಕದಲ್ಲಿ ಇರುತ್ತದೆ. ಒಂದು ಎಕ್ರೆ ಅಥವಾ ಅದಕ್ಕಿಂತ ಕಡಿಮೆ ಜಮೀನಿನಲ್ಲಿ ಭತ್ತ ಬಿತ್ತನೆ ಮಾಡಿದವರಿಗೆ ಕೃಷಿ ಯಂತ್ರದ ಮೂಲಕ ಕಟಾವು ಲಾಭಕ್ಕಿಂತ ನಷ್ಟವೇ ಹೆಚ್ಚು. ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಮಾಡಿದವರಿಗಷ್ಟೆ ಇದರಲ್ಲಿ ಸ್ವಲ್ಪ ಲಾಭದಾಯಕವಾಗಲಿದೆ.
4 ಹೆಚ್ಚುವರಿ ಯಂತ್ರಕ್ಕೆ ಪ್ರಸ್ತಾವನೆ
ರೈತರಿಗೆ ಖಾಸಗಿ ಕಟಾವು ಯಂತ್ರದಿಂದ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕೃಷಿ ಇಲಾಖೆ ಯಂತ್ರಧಾರೆ ಮೂಲಕ ಇನ್ನಷ್ಟು ಕಟಾವು ಯಂತ್ರಕ್ಕೆ ಕೃಷಿ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಡುಪಿ ಮತ್ತು ವಂಡ್ಸೆ ಹೋಬಳಿ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ಹೋಬಳಿಯಲ್ಲೂ ಯಂತ್ರಧಾರೆ ಕೇಂದ್ರದಲ್ಲಿ ಒಂದೊಂದು ಕಟಾವು ಯಂತ್ರವಿದೆ. ಅಷ್ಟಾದರೂ ಸಾಕಾಗು ವುದಿಲ್ಲ. ಹೀಗಾಗಿ ಈ ವರ್ಷ ನಾಲ್ಕು ಹೆಚ್ಚುವರಿ ಕಟಾವು ಯಂತ್ರವನ್ನು ಒದಗಿಸುವಂತೆ ಜಿಲ್ಲಾ ಕೇಂದ್ರದಿಂದ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಕಟಾವು ಬಾಡಿಗೆ ಎಷ್ಟು?
ಕಳೆದ ವರ್ಷ ಖಾಸಗಿ ಕಟಾವು ಯಂತ್ರದ ಮಾಲ ಕರು ಗಂಟೆಗೆ 2,500ರಿಂದ 2,800 ರೂ. ವರೆಗೂ ಬಾಡಿಗೆ ನಿಗದಿ ಮಾಡಿದ್ದರು. ಕಟಾವು ಆರಂಭದಲ್ಲಿ ರೈತರ ಬೇಡಿಕೆ ಮತ್ತು ಕಟಾವು ಪ್ರಮಾಣ ಆಧರಿಸಿ ಬಾಡಿಗೆ ನಿಗದಿ ಮಾಡುತ್ತಾರೆ. ಬೇಡಿಕೆ ಕಡಿಮೆಯಾ ದಂತೆ 2,200 ರೂ.ಗೂ. ಇಳಿಯುತ್ತದೆ. ಆದರೆ ಕೃಷಿ ಇಲಾಖೆಯ ಯಂತ್ರಧಾರೆ ಕೇಂದ್ರ ದಿಂದ ನೀಡುವ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ನಿಗದಿ ಮಾಡಲಾಗಿತ್ತು. ಜಿಲ್ಲೆಯಾದ್ಯಂತ ಇದು ಏಕರೂಪದಲ್ಲಿ ಇರುತ್ತದೆ. ಯಂತ್ರವು ಗಂಟೆಗೆ 1 ಎಕ್ರೆ ಜಮೀನಲ್ಲಿ ಕಟಾವು ಮಾಡುತ್ತದೆ.
ಗುರಿ ಹೆಚ್ಚಳ
ಕಳೆದ ವರ್ಷ ಕೃಷಿ ಇಲಾಖೆ ಜಿಲ್ಲೆ ಯಲ್ಲಿ 36 ಸಾವಿರ ಹೆಕ್ಟರ್ ಪ್ರದೇಶ ದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, 37,200 ಹೆಕ್ಟೇರ್ನಷ್ಟು ಬಿತ್ತನೆ ಮಾಡಲಾಗಿತ್ತು. ಈ ವರ್ಷ 38 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಒಟ್ಟಾರೆ 2 ಸಾವಿರ ಹೆಕ್ಟೇರ್ ನಲ್ಲಿ ಹೆಚ್ಚುವರಿ ಬಿತ್ತನೆಯ ಗುರಿಯಿದೆ. ಮುಂಗಾರು ಮುಗಿದ ಅನಂತರದಲ್ಲಿ ಉದ್ದು, ನೆಲಗಡಲೆ ಮೊದಲಾದ ದ್ವಿದಳ ಧಾನ್ಯದ ಬಿತ್ತನೆಯನ್ನು ಹೆಚ್ಚಿಸುವ ಗುರಿ ಹೊಂದಲಾ ಗಿದೆ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.