ಕಾಪು: ಆತ್ಮಹತ್ಯೆಗೆ ಯತ್ನಿಸಿದ್ದ ಹೂವಿನ ವ್ಯಾಪಾರಿ ಸಾವು
Team Udayavani, Feb 22, 2017, 11:13 AM IST
ಕಾಪು: ಸಾಲದ ಭಾಧೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಪುವಿನ ಹೂವಿನ ವ್ಯಾಪಾರಿ, ಸಾಮಾಜಿಕ ಚಿಂತಕ ಮಜೂರು ಗ್ರಾಮದ ಉಳಿಯಾರು ನಿವಾಸಿ ವರದರಾಜ್ ನಾಯಕ್ (44) ಸೋಮಧಿವಾಸ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಫೆ. 18ರಂದು ಬೆಳಗ್ಗೆ ವಿಷ ಸೇವಿಸಿದ್ದು, ಕರಂದಾಡಿ ಶಾಲಾ ಮೈದಾನದಲ್ಲಿ ಬಿದ್ದುಕೊಂಡಿದ್ದರು. ಬಳಿಕ ಸ್ಥಳೀಯರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಮೃತ ವರದರಾಜ್ಗೆ ಮದುವೆಯಾಗಿದ್ದರೂ ಮಕ್ಕಳಲಿಲ್ಲದ ಕೊರಗು ಅವರನ್ನು ಕಾಡುತ್ತಿತ್ತು. ಪತ್ನಿ ಮತ್ತು ತಾಯಿಯನ್ನು ಅಗಲಿದ್ದಾರೆ.
ಅವರು ಸುಮಾರು 25 ವರ್ಷಗಳಿಂದ ಕಾಪು ಪರಿಸರದಲ್ಲಿ ಹೂವಿನ ವ್ಯಾಪಾರಿಯಾಗಿದ್ದು, ವಿಧ ವಿಧದ ಡೆಕೋರೇಶನ್ ಮಾಡುವ ಮೂಲಕ ಮನೆ ಮಾತಾಗಿದ್ದರು. ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದ ಅವರು ಸಾಮಾಜಿಕ ಚಿಂತನೆಯುಳ್ಳವರಾಗಿಯೂ ಜನಾನುರಾಗಿಯಾಗಿದ್ದರು. ವ್ಯವಹಾರ ನಿಮಿತ್ತ ಹಲವೆಡೆಗಳಲ್ಲಿ ಸಾಲ ಮಾಡಿದ್ದ ಅವರು ಸಾಲವನ್ನು ಮರು ಪಾವತಿಸಲಾಗದೇ, ಬಡ್ಡಿ ತುಂಬಲೂ ಪರದಾಡುವಂತಾಗಿದ್ದು, ಅದರಿಂದ ತೀವ್ರ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸಂಶಯಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.