ಲಾವಣ್ಯ ಕಲಾ ಸಂಸ್ಥೆ ರಂಗಮನೆಯಲ್ಲೀಗ ಜಲಕ್ರಾಂತಿ
ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Aug 3, 2019, 5:14 AM IST
ಬೈಂದೂರು: ಮಳೆಕೊಯ್ಲು ಮಾಡಿದವರ ಅನುಭವಗಳು ಇತರರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಉದಯವಾಣಿ ಪ್ರತಿದಿನ ಮಳೆಕೊಯ್ಲು ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ದಕ್ಕೆ ಪೂರಕವೆಂಬಂತೆ ಲಾವಣ್ಯ ಕಲಾ ಸಂಸ್ಥೆ ಪ್ರಸ್ತುತ ಜಲಕಾಳಜಿಯ ಅಭಿಯಾನದ ಮೂಲಕ ಸಮಾಜಮುಖೀ ಸೇವೆಯಲ್ಲಿ ತೊಡಗಿ ಸಿಕೊಂಡಿದೆ.
ಉದಯವಾಣಿಯ ಜಲಸಾಕ್ಷರತೆಯ ಪ್ರೇರಣೆ ಯಿಂದ ಮಳೆ ನೀರು ಸಂಗ್ರಹ, ನೀರು ಇಂಗಿಸುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಬೈಂದೂರು ಭಾಗದಲ್ಲಿ ಪರಿಸರ ಅಭಿಯಾನ ಕೈಗೊಂಡಿದೆ.
ನೀರಿನ ಸಮಸ್ಯೆ ಪರಿಹಾರಕ್ಕೆ ನಾವೇನಾದರು ಪ್ರಯತ್ನ ಮಾಡಬೇಕು ಏನ್ನುವ ಯೋಚನೆ ಲಾವಣ್ಯ ಸಂಸ್ಥೆಯ ವ್ಯವಸ್ಥಾಪಕ ಗಣೇಶ ಕಾರಂತರವರದ್ದಾಗಿತ್ತು. ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಮಳೆ ನೀರು ಸಂಗ್ರಹದಲ್ಲಿ ತೊಡಗಿ ತಮ್ಮ ಮನೆ ಹಾಗೂ ಲಾವಣ್ಯ ರಂಗಮನೆಯ ವಿಶಾಲ ಭವನದ ಛಾವಣಿಯ ಹನಿ ಮಳೆ ನೀರು ಕೂಡಾ ವ್ಯರ್ಥವಾಗದ ರೀತಿಯಲ್ಲಿ ಅವುಗಳ ಸಂಗ್ರಹಣೆಗೆ ತೊಡಗಿಕೊಂಡರು. ಬಾವಿಯ ದಂಡೆಯ ಮೇಲೆ ಒಂದು ಚಿಕ್ಕ ಸಿಂಟೆಕ್ಸ್ ಟ್ಯಾಂಕ್ ಇಟ್ಟು ಅದಕ್ಕೆ ಜರಡಿಯನ್ನು ಅಳವಡಿಸಿ ಕಸಕಡ್ಡಿ ಗಳಿಂದ ಹೊರತಾದ ಶುದ್ಧ ನೀರನ್ನು ಟ್ಯಾಂಕ್ ಮೂಲಕ ಬಾವಿಗೆ ಹರಿಯುವಂತೆ ಮಾಡಿದ್ದಾರೆ.
ಅಲ್ಲದೆ ಅವರು ತಮ್ಮ ನೆರೆಹೊರೆಯವರಿಗೂ ಇದೇ ಮಾದರಿ ಅನುಸರಿಸುವಂತೆ ಮನ ಒಲಿಸಿದ್ದಾರೆ.
ಸಾಕಷ್ಟು ನೀರಿದೆ
ಉದಯವಾಣಿಯ ಜಲಸಾಕ್ಷರತೆ ಅಭಿಯಾನದ ಪ್ರೇರಣೆಯಿಂದ ಮನೆಯ ಬಾವಿಯಲ್ಲಿಯೂ ಮಳೆ ನೀರು ಸಂಗ್ರಹ ವಿಧಾನ ಅನುಸರಿಸಿದ್ದೇನೆ. ಬಳಿಕ ಲಾವಣ್ಯ ರಂಗಮನೆ ಹಾಗೂ ನೆರೆಹೊರೆಯವರಿಗೂ ಈ ವಿಧಾನ ಅನುಸರಿಸುವಂತೆ ತಿಳಿಸಿದೆ. ಪರಿಣಾಮವಾಗಿ ಕೆಲವು ವರ್ಷಗಳ ಹಿಂದೆ ಬೇಸಗೆಯಲ್ಲಿ ತೀವ್ರ ಜಲಕ್ಷಾಮ ಎದುರಿಸುತ್ತಿದ್ದ ಪರಿಸರದಲ್ಲಿ ಈಗ ಸಾಕಷ್ಟು ನೀರು ದಿನ ಬಳಕೆಗೆ ಲಭ್ಯವಿರುತ್ತದೆ. ಅಲ್ಲದೆ ನಮ್ಮ ಲಾವಣ್ಯ ಸಂಸ್ಥೆಯ ಮೂಲಕ ಪ್ರತಿವರ್ಷ ಮಳೆ ಕೊಯ್ಲು ಹಾಗೂ ನೀರು ಇಂಗಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಗಣೇಶ ಕಾರಂತ,
ವ್ಯವಸ್ಥಾಪಕ ಲಾವಣ್ಯ ಬೈಂದೂರು.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529