ಆದಿಗೋಕರ್ಣ ಪುನರ್ ನಿರ್ಮಾಣ: ಅರ್ಜಿ ವಜಾ
Team Udayavani, Jan 12, 2019, 1:25 AM IST
ಕುಮಟಾ/ಗೋಕರ್ಣ: ಮಹಾಬಲೇಶ್ವರ ದೇವಾಲಯದ ಪಾರ್ಶ್ವದಲ್ಲಿರುವ ಆದಿಗೋಕರ್ಣದ ಪುನರ್ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು ಕೋರ್ಟ್ ವೆಚ್ಚವನ್ನು ರಾಮಚಂದ್ರಾಪುರ ಮಠಕ್ಕೆ ಸಂದಾಯ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ಆದೇಶ ಹೊರಡಿಸಿದೆ.
ಆದಿಗೋಕರ್ಣ ದೇವಾಲಯ ಶಿಥಿಲವಾಗಿದ್ದ ಕಾರಣ ರಾಮಚಂದ್ರಾಪುರ ಮಠದ ಜ| ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಂತೆ ಪುನರ್ ನಿರ್ಮಾಣದ ಕಾರ್ಯವನ್ನು 2014ರಲ್ಲಿ ಆರಂಭಿಸಲಾಗಿತ್ತು. ಈ ಕಾರ್ಯಕ್ಕೆ ತಡೆ ನೀಡುವಂತೆ ಅರ್ಜಿದಾರರು ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕುಮಟಾದ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ತಡೆ ನೀಡುವಂತೆ ಮಾಡಲಾಗಿದ್ದ ಮೂಲ ದಾವೆಯನ್ನು ತಿರಸ್ಕರಿಸುವ ಜತೆಗೆ ಶ್ರೀಮಠಕ್ಕೆ ನ್ಯಾಯಾಲಯದ ವೆಚ್ಚವನ್ನೂ ನೀಡುವಂತೆ ಅರ್ಜಿದಾರರಿಗೆ ಆದೇಶಿಸಿದೆ.
ಆದಿಗೋಕರ್ಣದ ಪುನರ್ ನಿರ್ಮಾಣಕ್ಕೆ ತಡೆ ಕೋರಿದವರಿಗೆ ಸಂರಕ್ಷಣೆಯ ಯಾವ ಉದ್ದೇಶವೂ ಇಲ್ಲ, ಶ್ರೀಮಠದ ಆಡಳಿತಕ್ಕೆ ತೊಂದರೆ ಕೊಡುವುದಷ್ಟೇ ಅರ್ಜಿದಾರರ ಉದ್ದೇಶವಾಗಿತ್ತು. ಶ್ರೀಮಠದ ಆಡಳಿತದ ವಿರುದ್ಧ ಇರುವ ದುರುದ್ದೇಶವೇ ಈ ಅರ್ಜಿಗೆ ಮೂಲ ಕಾರಣ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.