ಆಯಾ ಜಿಲ್ಲೆಯ ಸಚಿವರಿಗೇ ಉಸ್ತುವಾರಿ ಪಟ್ಟ : ಅಶ್ವತ್ಥನಾರಾಯಣ
Team Udayavani, Feb 12, 2020, 7:13 PM IST
ಹೊನ್ನಾವರ: ಆಯಾ ಜಿಲ್ಲೆಯ ಸಚಿವರಿಗೇ ಉಸ್ತುವಾರಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ|ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಹೊನ್ನಾವರ ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ನೇಮಕವಾಗಲಿದ್ದಾರೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಕೆಲ ಖಾತೆ ಹಂಚಿಕೆಯಲ್ಲಿ ಅಸಮಾಧಾನವಿದೆ. ಅದನ್ನು ಚರ್ಚಿಸಿ ಖಾತೆ ಬದಲಾವಣೆ ಅಥವಾ ಪುನರ್ ರಚನೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಸ್ಪಷ್ಟ ಬಹುಮತ ಸಿಗದ ಕಾರಣ ಮೈತ್ರಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತೇನೋ ಗೊತ್ತಿಲ್ಲ. ಅವರ ಕೃಪೆ, ಇವರ ಕೃಪೆ ಎಂದು ಹೇಳಿ ಅಧಿಕಾರ ನಡೆಸಿದರೆ ಹೊರತು ಜನಪರ ಆಡಳಿತ ನಡೆಸಲು ವಿಫಲರಾದರು. ಇದರ ಪರಿಣಾಮ ಆ ಪಕ್ಷದಿಂದ ರಾಜೀನಾಮೆ ನೀಡಿ ಬಂದರು.
ನಮ್ಮ ಮುಂದಿರುವ ಗುರಿ ಜನಪರ ಆಡಳಿತ ನೀಡುವುದೊಂದೇ ಆಗಿದೆ. ಅದನ್ನು ನಾವು ನೀಡಲಿದ್ದೇವೆ. ಮುಂದಿನ 3 ವರ್ಷ ಯಾವುದೇ ಅಡ್ಡಿ ಇಲ್ಲದೇ ಸರ್ಕಾರ ಸುಸೂತ್ರವಾಗಿ ಮುನ್ನಡೆಯಲಿದೆ ಎಂದರು.