ರೈಲು-ಬಂದರು ಯೋಜನೆ ಬೇಕೋ-ಬೇಡವೋ?
Team Udayavani, May 4, 2018, 2:37 PM IST
ಹೊನ್ನಾವರ: ಬೇಲೆಕೇರಿ ಬಂದರು ಅಭಿವೃದ್ಧಿಗೆ 5ಸಾವಿರ ಕೋಟಿ ರೂ ವೆಚ್ಚಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ. ಹುಲಿ ಓಡಾಡುವ ಮಾರ್ಗಕ್ಕೆ ತೊಂದರೆಯಾಗುತ್ತದೆ ಎಂದು ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಪುನರಾರಂಭ ಆಗಿಲ್ಲ. ಈ ಎರಡು ಯೋಜನೆಗಳ ಪ್ರಸ್ತಾಪ ಬಂದಾಗಲೆಲ್ಲಾ ಪರಿಸರವಾದಿಗಳು ಪ್ರತಿಭಟಿಸುತ್ತಾ ಬಂದಿದ್ದಾರೆ. ರಾಜಕಾರಣಿಗಳು ಪ್ರತಿಭಟನಾ ಬಾವುಟ ಹಿಡಿದವರ ಜೊತೆ ಭಾವಚಿತ್ರ ತೆಗೆಸಿಕೊಂಡಿದ್ದಾರೆ. ಚುನಾವಣೆಗೆ ಸ ರ್ಧಿಸಿರುವ ಅಭ್ಯರ್ಥಿಗಳು ಜಿಲ್ಲೆ ಮಾತ್ರವಲ್ಲ ಮಲೆನಾಡು ಸಹಿತ ನಾಲ್ಕಾರು ಜಿಲ್ಲೆಗಳ ಅಭಿವೃದ್ಧಿಗೆ 25ಸಾವಿರ ಉದ್ಯೋಗಾವಕಾಶ ನೀಡುವ ಈ ಯೋಜನೆ ಬೇಕೋ ಬೇಡವೋ ಎಂಬುದನ್ನು ಈಗಲೇ ಹೇಳಬೇಕು.
ಅಧಿ ಕಾರ ಇದ್ದಾಗ ಒಂದುರೀತಿ, ಇಲ್ಲದಾಗ ಇನ್ನೊಂದುರೀತಿ ಮಾಡುತ್ತಾ ಬಂದ, ಮತ್ತೆ ವಿವಿಧ ಪಕ್ಷಗಳ ಟಿಕೆಟ್ ಹಿಡಿದು ಚುನಾವಣೆಗೆ ನಿಂತವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ದೇಶದ 12 ಮಹತ್ವದ ಬಂದರು 7 ಸಾವಿರ ಕೋಟಿ ರೂ. ಪ್ರತಿವರ್ಷ ಲಾಭಗಳಿಸುತ್ತಿರುವುದರಿಂದ ಬೇಲೆಕೇರಿ ಸಹಿತ ಜಿಲ್ಲೆಯ ಮೂರು ಬಂದರು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳಿಸಿ 4ವರ್ಷಗಳಾಗಿದ್ದು ಸತ್ಯ. ಹಿಂದೆ ಯಡಿಯೂರಪ್ಪನವರು ತಮ್ಮ ಎರಡು ಆಯವ್ಯಯದಲ್ಲಿ ಈ ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ. ನಂತರ ಯಡಿಯೂರಪ್ಪನವರನ್ನು ಉದಯವಾಣಿ ಪ್ರಶ್ನಿಸಿದಾಗ, ನಾನು ಈ ಯೋಜನೆಗಳ ಕುರಿತು ಈಗಲೂ ಪ್ರಸ್ತಾಪ ಮಾಡುತ್ತಿದ್ದೇನೆ, ಜಿಲ್ಲೆಯವರಿಗೆ ಆಸಕ್ತಿ ಇಲ್ಲ ಅಂದಿದ್ದರು. ಹೀಗಿದ್ದರೂ ಗಡ್ಕರಿ ಹೇಳಿದ್ದು ಸುಳ್ಳು ಎಂದು ದೇಶಪಾಂಡೆಯವರು ಹೇಳುತ್ತಾರೆ.
ಬೇಲೆಕೇರಿ ಬಂದರು ಅಭಿವೃದ್ಧಿ ಮಾಡಲು ಕೇಂದ್ರಕ್ಕೆ ಆಸಕ್ತಿಯಿದೆ, ಯೋಜನೆಯ ಪ್ರಸ್ತಾವನೆ ಕಳಿಸುವಂತೆ ಸಿದ್ಧರಾಮಯ್ಯನವರಿಗೆ ತಿಳಿಸಲಾಗಿತ್ತು ಆದರೆ ಯಾವುದೇ ಪ್ರಸ್ತಾವನೆ ಬರಲಿಲ್ಲ ಎಂದು ಗಡ್ಕರಿಯವರು ಹೇಳಿದ್ದಾರೆ. ಈ ಯೋಜನೆ ಜಾರಿಯಾದರೆ ಹುಬ್ಬಳ್ಳಿ, ಬೆಳಗಾವಿ, ಕಾರವಾರ,ಶಿವಮೊಗ್ಗ ಸಹಿತ ನಾಲ್ಕಾರು ಜಿಲ್ಲೆಗಳಿಗೆ ಪ್ರಯೋಜನವಾಗಿ 25ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಬಂದರು ಅಭಿವೃದ್ಧಿ ಜೊತೆಯಲ್ಲಿ ಸಾಗರಮಾಲಾ ಯೋಜನೆಯಡಿ 12ನಾಟಿಕಲ್ ಮೈಲು ಹೊರಗೆ ಮೀನುಗಾರಿಕೆ ನಡೆಸುವ ದೋಣಿ ಖರೀದಿಸಲು ಕೇಂದ್ರಸರ್ಕಾರ ಪರವಾನಗಿ ನೀಡಿದೆ. ಕರ್ನಾಟಕದ ಮೀನುಗಾರರು ಈ ಯೋಜನೆಯಡಿ ಪರವಾನಗಿ ಪಡೆದು ಲಾಭಗಳಿಸಬಹುದು.
ಜೊತೆಯಲ್ಲಿ ಕಾರವಾರ ಮತ್ತು ಒಳನಾಡಿನಲ್ಲಿ ಬೋಟ್ಬಸ್ಗಳಿಗೆ ಪರವಾನಗಿ ನೀಡಿ ಜಲಸಾರಿಗೆ ಅಭಿವೃದ್ಧಿಪಡಿಸುವ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಕಾರವಾರದಿಂದ ಗೋವಾಕ್ಕೆ ಸಮುದ್ರಮಾರ್ಗವಾಗಿ ಹೋಗಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಹಣತೊಡಗಿಸಲು ಕೇಂದ್ರ ಸಿದ್ಧ. ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದ ಮೇಲೆ ಈ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬಂದರು ನಿರ್ಮಾಣವಾದರೆ ಹುಬ್ಬಳ್ಳಿ ಅಥವಾ ತಾಳಗುಪ್ಪಾಕ್ಕೆ ರೈಲುಮಾರ್ಗ ನಿರ್ಮಾಣವಾಗಲೇಬೇಕು. ಪರಿಸರ ಹೆಸರಿನಲ್ಲಿ ಯೋಜನೆ ಕುರಿತು ಅತಿರೇಕದ ವಾದ ಮಂಡಿಸಲಾಗಿದೆ. ಈಬಾರಿ ಹುಲಿ ಓಡಾಡುವ ಮಾರ್ಗಕ್ಕೆ ತೊಂದರೆಯಾಗುತ್ತದೆ ಎಂದು ವರದಿ ಒಪ್ಪಿಸಿದೆ.
ಹುಲಿಗಾಗಿ ರಸ್ತೆ ಬಿಡಬೇಕೇ? ಉತ್ತರ ಕನ್ನಡ ಸಹಿತ ಸುತ್ತಲಿನ ನಾಲ್ಕಾರು ಜಿಲ್ಲೆಗಳಿಗೆ ಉಪಯುಕ್ತವಾಗುವ ಮೇಲಿನ ಎರಡು ಯೋಜನೆಗಳ ಪ್ರಸ್ತಾಪ ಬಂದಾಗ ಈಗ ಚುನಾವಣೆಗೆ ಬೇರೆ ಬೇರೆ ಪಕ್ಷದಿಂದ ನಿಂತವರು ವಿರೋಧ ಮಾಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ದಿನಕರ ಶೆಟ್ಟಿ, ಪ್ರದೀಪ ನಾಯ್ಕ ಮತ್ತು ಕೆಲವು ಖಾವಿಧಾರಿಗಳು ಈ ಯೋಜನೆಗಳನ್ನು ಬಹಿರಂಗವಾಗಿ ವಿರೋಧಿ ಸಿದ್ದಾರೆ. ದೇಶಪಾಂಡೆ ಸಹಿತ ಕಾಂಗ್ರೆಸ್ಸಿಗರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಮೇಲಿನ ಎರಡು ಯೋಜನೆಗಳನ್ನು ಜಾರಿಗೆ ತರುತ್ತದೆ ಎಂದು ಗಡ್ಕರಿ ಸಹಿತ ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಚುನಾವಣೆಗೆ ನಿಂತವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.
5ಸಾವಿರ ಕೋಟಿ ರೂಪಾಯಿಯಲ್ಲಿ ಬೇಲೆಕೇರಿ ಬಂದರು ಅಭಿವೃದ್ಧಿಯ ಪ್ರಸ್ತಾವನೆ ಬಂದಿದ್ದು ಸತ್ಯ. ಅಕ್ರಮ ಅದಿರು ಪ್ರಕರಣ ಅಲ್ಲಿ ನಡೆದಿರುವುದರಿಂದ ಬಂದರು ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ನಾವು ತದಡಿ, ಪಾವಿನಕುರ್ವಾ ಬಂದರು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹಿರಿಯ ಸಚಿವ ಜಿಲ್ಲೆಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಮೀನುಗಾರರನ್ನು ಮುಂದಿಟ್ಟುಕೊಂಡು ಇಂತಹ ಯೋಜನೆಗಳನ್ನು ವೃತ್ತಿಪರ ಪರಿಸರ ವಾದಿಗಳು ಪ್ರತಿಭಟನೆ ಮಾಡುವುದು, ಅದಕ್ಕೆ ರಾಜಕಾರಣಿಗಳು ಒಗ್ಗರಣೆ ಹಾಕುವುದು ನಡೆಯುತ್ತಾ ಬಂದಿದೆ. ಚುನಾವಣೆಯ ಮೊದಲೇ ಜಿಲ್ಲೆಯ ಎಲ್ಲ ಪಕ್ಷದ ಅಭ್ಯರ್ಥಿಗಳು ಈ ಯೋಜನೆಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.
ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ