ಹೆಚ್ಚುತ್ತಿದೆ ಮಾಸ್ಕ್ ಕಳಚಿ ಓಡಾಡುವವರ ಸಂಖ್ಯೆ
Team Udayavani, Nov 20, 2020, 8:30 PM IST
ಹೊನ್ನಾವರ: ಲಾಕ್ಡೌನ್ ತೆಗೆದರೂ ಕೋವಿಡ್ ಹೋಗಿಲ್ಲ, ಮಾಸ್ಕ್ ಹಾಕಿಕೊಂಡು, ಅಂತರ ಕಾಯ್ದುಕೊಂಡು ಅಗತ್ಯವಿದ್ದರೆ ಓಡಾಡಿ ಎಂದು ಪ್ರಧಾನಿಯಿಂದ ಆರಂಭಿಸಿ ಆಶಾ ಕಾರ್ಯಕರ್ತೆಯರವರೆಗೆ ಹೇಳುತ್ತಿದ್ದರೂ ಜನಕ್ಕೆ ಅರ್ಥವಾಗುವುದೇ ಇಲ್ಲ. ಕೋವಿಡ್ ಇಳಿಮುಖವಾದಂತೆ ಕುತ್ತಿಗೆಗೆ ಇಳಿದಿದ್ದ ಮಾಸ್ಕ್ ನ್ನು ಬಿಸಾಡಿ ಓಡಾಡುವವರೇ ಹೆಚ್ಚಾಗುತ್ತಿದ್ದು, ಡಿಸೆಂಬರ್, ಜನವರಿ ಚಳಿ ಹಾಗೂ ಪ್ರತಿ ತಾಲೂಕಿನಲ್ಲಿ ನಿಗದಿಯಾದ ಮದುವೆಗಳು ಯಾವ ಪರಿಸ್ಥಿತಿ ತಂದಿಡುತ್ತದೆಯೋ ಗೊತ್ತಿಲ್ಲ.
ಹೀಗೆ ನಿರ್ಲಕ್ಷಿಸಿದ ಕಾರಣ ದಕ್ಷಿಣದ ಜಿಲ್ಲೆಗಳಲ್ಲಿ ಉತ್ತರ ಕನ್ನಡಕ್ಕಿಂತ ಹೆಚ್ಚು ಸಾವು, ನೋವು ಸಂಭವಿಸಿತ್ತು. ವಿರಳ ಜನಸಂಖ್ಯೆ, ವಿವಿಧ ಇಲಾಖೆಗಳ ಶ್ರಮದಿಂದ ಕೋವಿಡ್ ಅತಿರೇಕಕ್ಕೆ ಹೋಗದಿದ್ದರೂ ಜಿಲ್ಲೆಯನ್ನು ಕಾಡಿದ್ದನ್ನು ಮರೆಯಬಾರದು. ದೆಹಲಿಯಲ್ಲಿ ಇಳಿಮುಖವಾಗಿದ್ದ ಕೋವಿಡ್ ಈಗ ಅಬ್ಬರಿಸುತ್ತಿದ್ದು, ನಿತ್ಯ ಸಾವಿರ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, ನೂರು ಜನ ನಿತ್ಯ ಸಾಯುತ್ತಿದ್ದಾರೆ. ಗಂಟೆಗೆ 4 ಜನರ ಸಾವು ಊಹಿಸಲೂ ಅಸಾಧ್ಯ. ಕಾಲೇಜುಗಳು ಆರಂಭವಾಗಿವೆ, ಕೋವಿಡ್ ಪರೀಕ್ಷೆ ನಡೆದಿದೆ, ದೀಪಾವಳಿ ಮಾತ್ರ ಮುಗಿದಿದೆ. ಕೋವಿಡ್ ಹೆಚ್ಚಾಗದಿರಲಿ ಎಂದು ಹಲವರು ಬೇಡಿಕೊಳ್ಳುತ್ತಿದ್ದರೆ ಸಂಬಂಧವಿಲ್ಲದಂತೆ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಮಾಸ್ಕ್ ದಂಡಹಾಕುವುದು ನಿಂತಿದೆ. ನಮಗೆ ಬಂದಿಲ್ಲ ಎಂದ ಮಾತ್ರಕ್ಕೆ ಬರಬಾರದು ಎಂದಿಲ್ಲ ಎಂದು ತಿಳಿದುಕೊಂಡವರ ಸಂಖ್ಯೆ ಕಡಿಮೆಯಿದೆ. ಮೊದಲಿನ ಭೀತಿ ಮಾಯವಾದದ್ದು ಸರಿ, ಕೋವಿಡ್ ನಿರ್ಲಕ್ಷಿಸುವುದು ಸರಿಯಲ್ಲ ಎನ್ನುತ್ತಾರೆ ವೈದ್ಯರು.
ಒಂದು ವಾರ ಕೋವಿಡ್ ರಜೆ ಪಡೆದಂತಿತ್ತು. ಈಗ 4 ಜನರಿಗೆ ಸೋಂಕು ಪಾಸಿಟಿವ್ ಬಂದಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. 500ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯ ವರದಿ ಬರಬೇಕಿದೆ.
ಗೋವಾದಲ್ಲಿ ಕೋವಿಡ್ ಇಳಿಮುಖ :
ಪಣಜಿ: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಗಣನೀಯ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕುದೃಢಪಟ್ಟ ವ್ಯಕ್ತಿಯ ಕುಟುಂಬದವರ ಮತ್ತು ಅವರ ಸಂಪರ್ಕಕಕ್ಕೆ ಬಂದವರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ರಾಜ್ಯ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಸುಮಾರು ಹದಿನೈದು ದಿನಗಳ ಹಿಂದೆಯೇ ರಾಜ್ಯದಲ್ಲಿ ಕೊರೊನಾ ತಪಾಸಣೆ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ಒಂದು ದಿನವೂ ಕೋವಿಡ್ ತಪಾಸಣೆ ಸಂಖ್ಯೆ 2000ಕ್ಕೆ ತಲುಪಿಲ್ಲ. ಆದರಇದೀಗ ರಾಜ್ಯದಲ್ಲಿ ತಪಾಸಣೆ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಮಂತ್ರಿ ರಾಣೆ ಪ್ರತಿಕ್ರಿಯೆ ನೀಡಿದರು.