ತಮಟೆ-ಕಹಳೆ ಊದಿ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಹೋರಾಟ-ಮನವಿ
Team Udayavani, Jul 12, 2019, 10:56 AM IST
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ನಗರದಲ್ಲಿ ತಮಟೆ-ಕಹಳೆ ಊದಿ ಪ್ರತಿಭಟನೆ ನಡೆಸಿದರು.
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ತಮಟೆ ಹಾಗೂ ಕಹಳೆ ಊದುತ್ತ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಗ್ರಾಮ ಪಂಚಾಯಿತಿಯ 61,000 ನೌಕರರಿಗೆ ಈಗಿನ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆ ಸೇರಿದಂತೆ ವೇತನ ನೀಡಲು 830 ಕೋಟಿ ಹಣ ಬೇಕಾಗುತ್ತದೆ. ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನು ರೈತರ ಸಾಲ ಮನ್ನಾದ ಹೆಸರಿನಲ್ಲಿ 312 ಕೋಟಿ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಗ್ರಾಪಂ ನೌಕರರ ವೇತನಕ್ಕಾಗಿ ಬೇಕಾಗುವ ಹೆಚ್ಚುವರಿ ಹಣಕ್ಕಾಗಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ. ಹೆಚ್ಚುವರಿ ಹಣ ಬರೆದು ಗ್ರಾಪಂ ನೌಕರರ ಸಮಸ್ಯೆ ಬಗೆಹರಿಯುವುದಿಲ್ಲ. 18 ಸಾವಿರ ಗ್ರಾಪಂ ನೌಕರರು ಇಎಫ್ಎಂಎಸ್ಗೆ ಸೇರಲಿಲ್ಲ. ಗ್ರಾಪಂಗಳಲ್ಲಿ ಇಎಂಎಫ್ಎಸ್ ಗೆ ಸೇರಿಸಲು ತೊಂದರೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 18 ಸಾವಿರ ನೌಕರರಿಗೆ ಇಎಫ್ಎಂಎಸ್ನಿಂದ ಅನುಮೋದನೆ ಸಿಕ್ಕಿಲ್ಲ. ಗ್ರಾಪಂಗಳಲ್ಲಿ ಶೇ.40 ತೆರಿಗೆ ವಸೂಲಾತಿಯಲ್ಲಿ ಕೊಡಬೇಕೆಂದು ಆದೇಶವಿದ್ದರೂ ನೀಡದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಗ್ರಾಪಂ ನೌಕರರಿಗೆ ಸೇವಾ ಪುಸ್ತಕ ಬರೆಯುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕರ್ತವ್ಯವಾಗಿದೆ. ನೌಕರರನ್ನು ಗೌರವದಿಂದ ನಡೆಸಿಕೊಳ್ಳದೆ ಇರುವ ಪ್ರವೃತ್ತಿ ಕೂಡ ಇದೆ. ಅದಕ್ಕಾಗಿ ಸರ್ಕಾರ ಮಾಡಿದ ಆದೇಶಗಳ ಜಾರಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ವಿಠuಲ ಹೊನಮೋರೆ ಮಾತನಾಡಿ, ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಲು 2019ರ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಪವಿತ್ರ ಕೇಸ್ನಲಿ ಸುಪ್ರಿಂ ಕೋರ್ಟ್ನ ತೀರ್ಪು ಬಂದಿದ್ದರಿಂದ ಪಿಡಿಒ ಬಡ್ತಿ ಗ್ರೇಡ್-1 ಬಡ್ತಿ ನೀಡಿ ಖಾಲಿಯಾದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತಾಗಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಪಂ ಉಪಕಾರ್ಯದರ್ಶಿ ಅಂಬರೀಶ ನಾಯಕ, ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖೀತ ರೂಪದಲ್ಲಿ ಪತ್ರ ವ್ಯವಹಾರ ಮಾಡಿದ್ದಾಗಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಟ್ಟರು. ಸಂಘಟನೆ ಪ್ರಮುಖರಾದ ಕುಮಾರ ರಾಠೊಡ, ರಾಜು ಜಾಧವ, ಭಾರತಿ ನಡುವಿನಕೇರಿ, ಗಜರಾಬಾಯಿ ಮಸಳಿಕೇರಿ, ಸಕ್ಕುಬಾಯಿ ಹರಿಜನ, ಚಂದ್ರಕಾಂತ ವಾಲಿಕಾರ, ಅಲ್ಲಾವುದ್ದೀನ ಇಂಡಿ, ಚಿಕ್ಕಯ್ಯ ಹೋಕಳೆ, ತುಕಾರಾಮ ಬೇನೂರ, ಶಿವಪ್ಪ ಲಾಡರ, ಯಲ್ಲಪ್ಪ ತೋಳೆ, ಗುರಣ್ಣ ಮನಗೂಳಿ, ಅಲ್ಲೂ ಹತ್ತೂರಕರ, ಪವನ ಕುಲಕರ್ಣಿ, ವಿಠuಲ ಬಬಲಾದಿ, ಎಂ.ಕೆ.ಚಳ್ಳಗಿ, ಮಡಿವಾಳಪ್ಪ ಕೊಂಡಗೂಳಿ, ಅಬ್ದುಲ್ ತಮದಡ್ಡಿ, ಶಿವು ನಾಲ್ಕಮಕ್ಕಳ, ಶೇಖು ಲಮಾಣಿ, ಚನಮಲ್ಲಪ್ಪ ಗುಡ್ಡೆದ, ದುರ್ಗಪ್ಪ ಬುದ್ನಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.