ಎಲ್ಲರ ಹಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ: ನಾಯಕ
Team Udayavani, Mar 24, 2022, 6:13 PM IST
ಹುಣಸಗಿ: ಸರ್ವ ಜನಾಂಗದ ಹಿತಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ದೇವತ್ಕಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದೇ ಬಿಜೆಪಿ ಕೆಲಸ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಐದು ವರ್ಷ ಸುಭದ್ರ ಆಡಳಿತ ನಡೆಸಿ ಎಲ್ಲರ ಏಳ್ಗೆಗಾಗಿ ಶ್ರಮಿಸಿದೆ. ಈಗ ಬಿಜೆಪಿ ಅಧಿಕಾರದಲ್ಲಿ ಕೊರೊನಾ ಹಾವಳಿ, ಬೆಲೆ ಏರಿಕೆ, ರೈತರಿಗೆ ನಷ್ಟ ಸೇರಿ ಒಂದಿಲ್ಲೊಂದು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಜನರ ನೆಮ್ಮದಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಭೀಮರಾಯ ಮೂಲಿಮನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಬಿಜೆಪಿ ಲೂಟಿ ಸರಕಾರ, ಸಾಮಾನ್ಯ ಜನರ ಗೋಳು ಆಲಿಸುವ ಶಕ್ತಿ ಅದಕ್ಕಿಲ್ಲ. ಸುಳ್ಳು ಭರವಸೆ ನೀಡುತ್ತ ಜನರ ದಾರಿ ತಪ್ಪಿಸುವುದೇ ಅದರ ಕೆಲಸ ಎಂದು ಗುಡುಗಿದರು.
ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿದರು. ನಂತರ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಪೂಜ್ಯ ಭೀಮಣ್ಣ ಮುತ್ಯಾ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಮುದಿಗೌಡ (ಗೌಡಪ್ಪಗೌಡ) ಹನುಮರೆಡ್ಡಿ ಕುಪ್ಪಿ, ಬಾಪುಗೌಡ ಪಾಟೀಲ, ಶರಣುಸಾಹು ದಂಡಿನ್, ವೆಂಕಟೇಶ ನಾಯಕ ಜಹಾಗೀರದಾರ, ಆರ್.ಎಂ. ರೇವಡಿ, ಪರಣ್ಣಗೌಡ ಕೋನಾಳ, ಗುಂಡಪ್ಪ ಸೊಲ್ಲಾಪುರ, ನಿಂಗಯ್ಯ ಬೂದಗುಂಪಿ, ನಿಂಗನಾಯ್ಕ ರಾಠೊಡ ಇತರರಿದ್ದರು.