ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಲಿ
Team Udayavani, Feb 10, 2022, 2:41 PM IST
ಯಾದಗಿರಿ: ಹುಮನಾಬಾದ್ ತಹಶೀಲ್ದಾರ್ ಮೇಲೆ ನಡೆದ ಹಲ್ಲೆ ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಮತ್ತು ಬೇಡ ಜಂಗಮ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹುಮನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೇ ಈ ಪ್ರಕರಣ ಕಾರ್ಯಾಂಗ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಹುಮನಾಬಾದ್ ತಹಶೀಲ್ದಾರ್ಗೆ ವೈಯಕ್ತಿಕ ವೈಷಮ್ಯದಿಂದ ಕೆಲವರು ಕಿರುಕುಳ ನೀಡಿದ್ದಾರೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶದಿಂದ ಡಾ| ಬಿ.ಆರ್. ಅಂಬೇಡ್ಕರ್ ಹೆಸರು ಹೇಳಿಕೊಂಡು ಸಂವಿಧಾನ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ರಾಜ್ಯಾದ್ಯಂತ ವೀರಶೈವ ಲಿಂಗಾಯತ ಸಮಾಜದ ಸರ್ಕಾರಿ ನೌಕರರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ಮುಂದೆ ಈ ರೀತಿ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಶರಣಬಸವ ಸ್ವಾಮಿ ಬದ್ದೆಪಲ್ಲಿ, ಗೌರಿಶಂಕರ ರಾಮಗಿರಿಮಠ, ಸಿದ್ದಪ್ಪ ಹೊಟ್ಟಿ, ಮಹೇಶ ಆನೆಹೊಂದಿ, ಚನ್ನವೀರಯ್ಯ ಸ್ವಾಮಿ ಕೋಳೂರ, ಪ್ರಭು ಮುಂಡರಗಿಮಠ, ರುದ್ರಮೂರ್ತಿ ಹಿರೇಮಠ, ಬಸವರಾಜ್ ಸಾವೂರ, ನಾಗನಗೌಡ ಬೆಳಿಗೇರ, ಮಹೇಶ ಸ್ವಾಮಿ, ವೀರಭದ್ರಯ್ಯಸ್ವಾಮಿ ಜಾಕಮಠ, ರಾಜಶೇಖರ ಸ್ವಾಮಿಇದ್ದರು.