ಪ್ರವಚನದಿಂದ ಮನಸ್ಸು ಶುದ್ದಿ
Team Udayavani, Feb 6, 2022, 3:18 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದ ಶ್ರೀಗುರು ದುರದುಂಡೇಶ್ವರ ವಿರಕ್ತಮಠದಲ್ಲಿ 21ನೇ ಕಾರ್ತಿಕೋತ್ಸವ ನಿಮಿತ್ತ ಆರಂಭವಾದ ಬಸವ ಚರಿತಾಮೃತ ಪ್ರವಚನ ಸಾಂಗತ್ಯ ವೇಳೆ ಜನಿಸಿದ ಬಸವಣ್ಣನವರಿಗೆ ಸುಮಂಗಲಿಯರು ಜೋಗುಳ ಹಾಡಿ ನಾಮಕರಣ ಮಾಡಿದ್ದು ಗಮನ ಸೆಳೆಯಿತು.
ಪ್ರವಚನಕಾರ ಗಡಿಗೌಡಗಾಂವ್ ಹಾವಗಿ ಮಠದ ಡಾ| ಶಾಂತವೀರ ಶಿವಾಚಾರ್ಯರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸಂತ-ಶರಣರ, ಮಹಾತ್ಮರ ನುಡಿಗಳು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ಶಕ್ತಿ ಪಡೆದುಕೊಂಡಿವೆ. ಬಸವ ಚರಿತಾಮೃತ ಪ್ರವಚನ ಆಲಿಸುವುದು ಪುಣ್ಯದ ಸಂಗತಿ, ಎಲ್ಲೆಡೆ ವ್ಯಾಪಿಸಿದ ಕೊರೊನಾ ಎನ್ನುವ ಮಹಾಮಾರಿ ತೊಲಗಿ ಜಗದ ಜನ ನೆಮ್ಮದಿಯ ಜೀವನ ನಡೆಸಲಿ ಎಂದು ಹೇಳಿದರು.
ನಿತ್ಯ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಿ ಆಗುವ ಜತೆಗೆ ಮನದ ಕಲ್ಮಶ ತೊಲಗಿ ಪರಿಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ. ಬಾಲ ಬಸವನ ಪವಾಡ, ಲೀಲೆಗಳು ನೊಂದವರ ಕಣ್ಣೀರನ್ನು ಒರೆಸಿವೆ. ಬಸವಣ್ಣನವರ ಹೆರಸಲ್ಲೇ ಉಸಿರು ಇದೆ. ಶರಣರ ನಾಮಕರಣ ಅಂದರೆ ಅದು ಹಬ್ಬವೇ ಸರಿ ಎಂದು ಹೇಳಿದರು.
ಶ್ರೀಮಠದ ಪೂಜ್ಯರಾದ ಶಿವಕುಮಾರ ಸ್ವಾಮೀಜಿ, ಡಾ| ಬಿ.ಬಿ. ಬಿರಾದಾರ, ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ, ಮಲ್ಲಿಕಾರ್ಜುನ ಆರಲಗಡ್ಡಿ ಸೇರಿ ಗುರು-ಹಿರಿಯರು, ಯುವಕರು, ಮಹಿಳೆಯರು, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಬಳಿಕ ರಾಜೇಶ್ವರಿ ಹಿರೇಮಠ ದಂಪತಿ ಅನ್ನಸಂತರ್ಪಣೆ ನಡೆಸಿಕೊಟ್ಟರು.