ಸಿಂಧನಕೇರಾ ಗ್ರಾಪಂ ಸಭೆ
Team Udayavani, Dec 31, 2021, 12:00 PM IST
ಹುಮನಾಬಾದ: ತಾಲೂಕಿನ ಸಿಂಧನಕೇರಾ ಗ್ರಾಪಂನಲ್ಲಿ ಗುರುವಾರ ನಡೆಯಬೇಕಿದ ಸಾಮಾನ್ಯ ಸಭೆಯಲ್ಲಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ.
ಒಟ್ಟು 19 ಸದಸ್ಯರ ಪೈಕಿ 7 ಜನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಕೋರಂ ಕೊರತೆ ಕಾರಣ ನೀಡಿ ರದ್ದಾಗಿದೆ. ಆದರೆ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಹಾಗೂ ಪಂಚಾಯತ ಅಧ್ಯಕ್ಷೆ ಸುನೀತಾ ಪಾಟೀಲ ಮಧ್ಯೆ ಇರುವ ಮುನಿಸು ಬಹಿರಂಗಗೊಂಡಿದೆ. ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರೆ, ಅಧ್ಯಕ್ಷರು ಮಾತ್ರ ಪಂಚಾಯತ ಪಿಡಿಒ ಜನರ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿವಿಧ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಗುರುವಾರ ಸಿಂಧನಕೇರಾ ಗ್ರಾಪಂ ಕಚೇರಿಗೆ ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ತಾಪಂ ಇಒ ಮುರಗೇಪ್ಪಾ, ಸಹಾಯಕ ನಿರ್ದೇಶಕಿ ಶಿವಲೀಲಾ ಭೇಟಿ ನೀಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ವೈಯಕ್ತಿಕ ವಿಷಯಗಳು ಬಿಟ್ಟಿ ಗ್ರಾಮಗಳ ಅಭಿವೃದ್ಧಿ ಕಾರ್ಯಗಳ ಕಡೆಗೆ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿ ಹೇಳಿದರು. ಆದರೆ, ಈ ಮಧ್ಯೆ ಅನೇಕ ಭ್ರಷ್ಟಾಚಾರದ ವಿಷಯಗಳು ಕೂಡ ಸದಸ್ಯರು ಪ್ರಾಸ್ತಾಪ ಮಾಡಿದರು.
ಸಿಂಧನಕೇರಾ ಪಿಡಿಒ ವಿರುದ್ಧ ವಿವಿಧ ಆರೋಪಗಳು ಇರುವ ಕಾರಣ ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಂಡು ಬೇರೆಡೆಗೆ ವರ್ಗಾಹಿಸುವಂತೆ ಅನೇಕ ಬಾರಿ ಜಿಪಂ, ತಾಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಹೋಗಿದೆ. ಆದರೂ, ಕೂಡ ಯಾರು ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಪಿಡಿಒ ರಾಜಕೀಯ ಮಾಡುತ್ತಿದ್ದು, ಸದಸ್ಯರ ಮಧ್ಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.