ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ
Team Udayavani, Mar 29, 2022, 12:55 PM IST
ಸುರಪುರ: ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ಕಾರ್ಮಿಕ ಸಂಘಟನೆಗಳ (ಜೆಸಿಟಿ ಯು) ತಾಲೂಕು ಸಮಿತಿಯವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರು ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರವು ಯೋಜನೆ ಕಾರ್ಮಿಕರಾದ ಅಂಗನವಾಡಿ, ಅಕ್ಷರ ದಾಸೋಹ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಲು ನಿರಾಕರಿಸುತ್ತಿದೆ. ಅವರನ್ನು ಕನಿಷ್ಠ ವೇತನದ ಕಾಯ್ದೆಯಡಿ ತರಲು ಸಿದ್ಧವಿಲ್ಲ. ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸಮಾನ ಸೌಲಭ್ಯಗಳನ್ನು ನೀಡಲು ತಯಾರಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ರೈತ ವಿರೋಧಿ ಕೃಷಿ ಕಾಯ್ದೆಗಳು, ಅಗತ್ಯ ವಸ್ತುಗಳು ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳ ಸುಗ್ರೀವಾಜ್ಞೆಗಳನ್ನು ಕೈ ಬಿಡಬೇಕು. ನೆರೆ ಪರಿಹಾರ, ಬಗರ್ ಹುಕುಂ, ಅರಣ್ಯ ಭೂಮಿಗಳ ಸಕ್ರಮ, ಕೃಷಿ ಉತ್ಪನ್ನ ಖರೀದಿ ಕೇಂದ್ರಗಳ ಆರಂಭ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗ ಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಅವರಿಗೆ ಮನವಿ ಸಲ್ಲಿಸಲಾಯಿತು. ಅಂಗನವಾಡಿ ನೌಕರರ ತಾಲೂಕು ಸಮಿತಿ ಅಧ್ಯಕ್ಷೆ ನಸೀಮಾ ಮುದ್ನೂರ, ಕಾರ್ಯದರ್ಶಿ ಸುರೇಖಾ ಕುಲಕರ್ಣಿ, ರಾಧಾಬಾಯಿ ಲಕ್ಷ್ಮೀಪುರ, ಯಲ್ಲಪ್ಪ ಚಿನ್ನಾಕಾರ, ಪ್ರಕಾಶ ಆಲ್ಹಾಳ, ಅಬಸಮ್ಮ ಅಲ್ಹಾಳ, ಕಾರ್ಯದರ್ಶಿ ಗುರುದೇವಿ ಹಿರೇಮಠ, ಶಹಾಜಾಬಿ ಬೇಗಂ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಯಲ್ಲಪ್ಪ ಅರಳಗುಂಡಗಿ, ಕಾರ್ಯದರ್ಶಿ ಬಸವರಾಜ ಹೇಮನೂರು, ಮಂಜುಳಾ ಸಂತ್ರಾಸವಾಡಿ, ದೇವಮ್ಮ ಇದ್ದರು.