Yadagiri; ರಾಮತೀರ್ಥವನ್ನು ಬರುವ ದಿನಗಳಲ್ಲಿ ಅಭಿವೃದ್ಧಿ ಪಡಿಸುವೆ: ಶಾಸಕ ಕಂದಕೂರ
Team Udayavani, Jan 22, 2024, 3:02 PM IST
ಯಾದಗಿರಿ: ಶ್ರೀರಾಮನೇ ನೆಲೆ ನಿಂತು ತೀರ್ಥಕೊಳವನ್ನು ನಿರ್ಮಿಸಿದ್ದಾನೆ ಎನ್ನುವುದು ಇಲ್ಲಿನ ಪ್ರತೀತಿ. ಯರಗೋಳದ ಶ್ರೀ ರಾಮಲಿಂಗೇಶ್ವರ ಬೆಟ್ಟವನ್ನು ಬರುವ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವುದು ಯೋಚನೆಯಿದೆ ಎಂದು ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್ ಹೇಳಿದರು.
ಅಯೋಧ್ಯೆಯಲ್ಲಿನ ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಅಂಗವಾಗಿ ಯರಗೋಳ ಗ್ರಾಮದಲ್ಲಿ ರಾಮಲಿಂಗೇಶ್ವರ ಬೆಟ್ಟದ ರಾಮತೀರ್ಥ ಕೊಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಊರಿನ ಬಸ್ ತಂಗುದಾಣದಿಂದ, ಆಂಜನೇಯ ಕಟ್ಟೆ, ಗುಡೆ ಕಟ್ಟೆ ಮುಖಾಂತರ ಬೆಟ್ಟದ ಇಕ್ಕೆಲಗಳಲ್ಲಿ ಜನರು ನಡೆದು, ರಾಮ ತೀರ್ಥಕೊಳಕ್ಕೆ ಜೈ ಶ್ರೀ ರಾಮ ಎಂದು ಜೈಕಾರ ಕೂಗುತ್ತಾ ತಲುಪಿದರು.
ಕೋಬಾಳದ ಹಣಮಂತ ತಾತನವರ್ ಪೂಜೆಯಲ್ಲಿ ಭಾಗವಹಿಸಿದರು. ಜೊತೆಗೆ ಶಾಸಕರಾದ ಶರಣಗೌಡ ಕಂದಕೂರ ಭಕ್ತರೊಟ್ಟಿಗೆ ಸೇರಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.
ಐತಿಹಾಸಿಕವಾದ ಶ್ರೀರಾಮಲಿಂಗೇಶ್ವರ ಬೆಟ್ಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ದರ್ಶನ ಪಡೆದಕೊಳ್ಳುತ್ತಿರುವುದು ಸಂತದ ತಂದಿದೆ. ರಾಮಾಯಣ ಮೂಲ ನೆಲಯಲ್ಲಿರುವ ಈ ಪುಣ್ಯಕ್ಷೇತ್ರವನ್ನು ನೋಡುವುದೇ ಒಂದು ಸೌಭಾಗ್ಯ ಎಂದರು.
ಪಂ.ಸತ್ಯಬೋದಾಚಾರ್ಯ ಘಟಾಲಿ ಪೂಜೆ ಕಾರ್ಯಗಳನ್ನು ನೆರವೇರಿಸಿದರು. ಗ್ರಾ.ಪಂ ಅಧ್ಯಕ್ಷ ರಾಮಣ್ಣ ಅಲ್ಲೀಪುರ, ಸಾಬಣ್ಣ ಬಾನರ್, ಶಿವು ಹಿರಿಕೇರಿ, ನಾಗರೆಡ್ಡಿ ಬಾನರ್, ಮಾರ್ಕಂಡಪ್ಪ ಮಾನೇಗಾರ, ಶಿವಯೋಗಿ ಹಿರಿಕೇರಿ, ಹಣಮಂತ ತಳವಾರ ಇತರಿರದ್ದರು.
ಅನ್ನದಾಸೋಹ: ರಾಮತೀರ್ಥ ಬೆಟ್ಟದಲ್ಲಿ ಭಕ್ತರಿಗಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಯರಗೋಳ ಗ್ರಾಮದ ಜನರು ಹಾಗೂ ಸುತ್ತಲೂ ಇರುವ ಇನ್ನೂ ಗ್ರಾಮಗಳಿಂದ ಮೂರು ಸಾವಿರಕ್ಕೂ ಅಧಿಕ ಜನರು ಬಂದು ಪ್ರಸಾದ ಸವಿದರು.
ಶ್ರೀ ರಾಮಲಿಂಗೇಶ್ವರ ಬೆಟ್ಟದಲ್ಲಿ ಈಗಲೂ ಜಿನುಗುತ್ತಿದೆ ರಾಮತೀರ್ಥ. ರಾಮನೇ ಬಾಣ ಹೊಡೆದು ನಿರ್ಮಿಸಿದ ಕೊಳದಲ್ಲಿ ನೀರು ಚಿಮ್ಮುವ ಮನಮೋಹಕ ದೃಶ್ಯ ಭಕ್ತರಿಗೆ ಮತ್ತಷ್ಟು ಸಂತಸ ತಂದಿತು.
ಅರಣ್ಯ ಇಲಾಖೆಯೊಂದಿಗೆ ಸ್ಥಳದ ಬಗ್ಗೆ ಚರ್ಚಿಸಿ, ಬೆಟ್ಟದ ಅಭಿವೃದ್ಧಿಗೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಶಾಸಕ ಕಂದಕೂರು ತಿಳಿಸಿದರು.