“ಕೋಲಿ ಸಮಾಜ ಎಸ್ಟಿಗೆ ಸೇರಿಸದಿದ್ದರೆ ನೇಣಿಗೆ ಹಾಕಿ’
Team Udayavani, Apr 22, 2019, 3:00 AM IST
ಕಲಬುರಗಿ: “ಲೋಕಸಭಾ ಚುನಾವಣೆ ಮುಗಿದ ನಂತರ ಎರಡು ತಿಂಗಳು ದೆಹಲಿಯಲ್ಲಿ ಸಮಾಜದ ನಾಯಕರೊಂದಿಗೆ ಠಿಕಾಣಿ ಹೂಡಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಿಕೊಂಡೇ ಆದೇಶ ಪತ್ರವನ್ನು ದಿ| ವಿಠ್ಠಲ ಹೇರೂರ ಸಮಾಧಿ ಮೇಲಿಟ್ಟು ಸಮಾಜದ ಋಣ ತೀರಿಸುತ್ತೇನೆ. ಇಲ್ಲದಿದ್ದರೆ ನನ್ನನ್ನು ನೇಣಿಗೆ ಏರಿಸಿ’ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.6ರಂದು ಮೋದಿ ಕಲಬುರಗಿಗೆ ಬಂದಾಗ ಮನವಿ ಸಲ್ಲಿಸಿದ್ದು, ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಒಂದು ವೇಳೆ ಕೋಲಿ ಸಮಾಜ ಎಸ್ಟಿಗೆ ಸೇರದಿದ್ದರೆ ಸಮಾಜದ ವತಿಯಿಂದ ನೇಣಿಗೆ ಏರಿಸಬಹುದು ಎಂದರು.
ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಮನಮೋಹನ್ ಸಿಂಗ್ ಸಂಪುಟದಲ್ಲಿ ಕಾರ್ಮಿಕ ಸಚಿವ ಜತೆಗೆ ಸಾಮಾಜಿಕ ನ್ಯಾಯ ಖಾತೆ ಸಹ ಹೊಂದಿದ್ದರು. ಆವಾಗ ಮನಸ್ಸು ಮಾಡಿದ್ದರೆ ಕೋಲಿ ಸಮಾಜ ಎಸ್ಟಿಗೆ ಸೇರುತ್ತಿತ್ತು. ಬಿಜೆಪಿ ಕೋಲಿ ಸಮಾಜಕ್ಕೆ ಮಹತ್ವ ನೀಡಿದೆ.
ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಸಮಾಜದ ರಾಮನಾಥ ಕೋವಿಂದ, ಸ್ವಾಧ್ವಿ ನಿರಂಜನಾ ಅವರನ್ನು ಮಂತ್ರಿಯನ್ನಾಗಿ ಮಾಡಿದೆ. ಉತ್ತರ ಪ್ರದೇಶದಲ್ಲಿ 13 ಜನ ಕೋಲಿ ಸಮಾಜದವರಿಗೆ ಎಂಪಿ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿ ಎನ್. ರವಿಕುಮಾರ ಅವರನ್ನು ಎಂಎಲ್ಸಿಯಾಗಿ ಮಾಡಲಾಗಿದೆ ಎಂದರು.