ಎಸ್ಡಿಪಿಐ ಜತೆ ಕಾಂಗ್ರೆಸ್ಗೆ ನಂಟು
Team Udayavani, Mar 29, 2019, 6:10 AM IST
ಸುಳ್ಯ: ಬಿಜೆಪಿ ಪಕ್ಷಕ್ಕೆ ಎಸ್ಡಿಪಿಐ ಜತೆ ಮೈತ್ರಿ ಮಾಡಿಕೊಳ್ಳಬೇಕಾದ ದುಃಸ್ಥಿತಿ ಬಂದಿಲ್ಲ. ಎಸ್ಡಿಪಿಐ ಜತೆಗೆ ನಂಟು ಇಟ್ಟುಕೊಂಡಿರುವುದು ಕಾಂಗ್ರೆಸ್ ಮಾತ್ರ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ಟೀಕಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಮುಖಂಡರು ಎಸ್ಡಿಪಿಐ ಅಭ್ಯರ್ಥಿ ಮನೆಗೆ ಹೋಗಿ ನಾಮಪತ್ರ ಹಿಂದಕ್ಕೆ ತೆಗೆಸಿದ್ದರು. ಈ ಬಾರಿ ಕೂಡ ಕಾಂಗ್ರೆಸ್ ನಾಮಪತ್ರ ತೆಗೆಸುತ್ತದೆ ಎಂದರು.
ಆದರ್ಶ ಗ್ರಾಮ ಶೇ. 60 ಪೂರ್ಣ ಆದರ್ಶ ಗ್ರಾಮ ಅಂದರೆ ಅಭಿವೃದ್ಧಿ ಮಾತ್ರ ಅಲ್ಲ. ಅದಕ್ಕೊಂದು ಗೈಡ್ಲೈನ್ ಇದೆ. ಆ ಆಧಾರದಲ್ಲಿ ಅಲ್ಲಿ ಕೆಲಸ ಕಾರ್ಯ ನಡೆಯಬೇಕು.
ಸಮೀಕ್ಷೆಯೊಂದು ಬಳ್ಪ ಆದರ್ಶ ಗ್ರಾಮ ಪ್ರಗತಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿ ಇರುವುದನ್ನು ಬಹಿರಂಗಗೊಳಿಸಿದೆ. ಶೇ. 60ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಆದರ್ಶ ಗ್ರಾಮದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಮುಖಂಡರು, ಕಳೆದ 60 ವರ್ಷದಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಅನ್ನುವುದನ್ನು ಹೇಳಲಿ ಎಂದು ನಳಿನ್ ಸವಾಲೆಸೆದರು.
ಈ ಹಿಂದೆ ವಾಣಿಜ್ಯ ಸಚಿವರು ಸುಳ್ಯದಲ್ಲಿ ಸಂವಾದ ನಡೆಸಿದ ಬಳಿಕ ದಿಲ್ಲಿಯಲ್ಲಿ ಸಭೆ ನಡೆಸಿದ್ದಾರೆ. ಇಲ್ಲಿಯ ಕೃಷಿಕರ ಬೇಡಿಕೆಗೆ ಸ್ಪಂದಿಸುವ ಹಾಗೂ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಿದೆ ಎಂದರು. ಬಿಎಸ್ಎನ್ಎಲ್ ಕುರಿತ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ. ನೀತಿ ಸಂಹಿತೆ ಇರುವುದರಿಂದ ಈ ಚುನಾವಣೆ ಮುಗಿದ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕರಾದ ಎಸ್. ಅಂಗಾರ, ಉಲ್ಲಾಸ್ ಕೋಟ್ಯಾನ್, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕ್ಷೇತ್ರದ ಚುನಾವಣಾ ಸಂಚಾಲಕ ಗೋಪಾಲ ಕೃಷ್ಣ ಹೇರಳೆ, ಸುಳ್ಯ ಮಂಡಲ ಸಂಚಾಲಕ ಹರೀಶ್ ಕಂಜಿಪಿಲಿ, ಜಿಲ್ಲಾ ಮಾಧ್ಯಮ ಪ್ರಮುಖ್ ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.