ಮತದಾನ ಮಾಡಿದರಷ್ಟೇ ಕ್ಷೌರ!
Team Udayavani, Apr 12, 2019, 11:05 AM IST
ಬೆಂಗಳೂರು: ಮತದಾನದ ದಿನ (ಏ.18, 23) ಮತ ಚಲಾಯಿಸಿ ಬಂದವರಿಗಷ್ಟೇ ಕ್ಷೌರ ಸೇವೆ ಒದಗಿಸಲು ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ತೀರ್ಮಾನಿದೆ ಎಂದು ರಾಜ್ಯ ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸವಿತಾ ಸಮಾಜವು ಈ ಕುರಿತು ಜನ ಜಾಗೃತಿ ಮೂಡಿಸಲು ಕ್ಷೌರ ಕಾಯಕ ಆಂದೋಲನ ಹಮ್ಮಿಕೊಂಡಿದೆ. ಏ.18 ಮತ್ತು 23ರಂದು ಯಾರು ಮತಚಲಾವಣೆ ಮಾಡುತ್ತಾರೋ ಅವರಿಗೆ ಮಾತ್ರ ಸಲೂನ್ಗಳಲ್ಲಿ ಕ್ಷೌರ ಮಾಡಲಾಗುವುದು. ಮತ ಚಲಾಯಿಸದಿದ್ದರೆ ಅವರಿಗೆ ಅಂದು ಕ್ಷೌರವಿಲ್ಲ. ಈ ಮೂಲಕ ಮತದಾನ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಸುಮಲತಾ ಅವರ ಕುರಿತು ಜಾತಿ ನಿಂದನೆ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಶಿವರಾಮೇಗೌಡರು, ಜಾತಿ ರಾಜಕೀಯ ಮಾಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.