“ವರಕವಿ ಮುದ್ದಣನ ಸಾಧನೆ ಅಪಾರ’
150ನೇ ಜಯಂತಿ ಆಚರಣೆ: ಪುಸ್ತಕ ಪ್ರದರ್ಶನ
Team Udayavani, Jan 25, 2020, 8:23 PM IST
ಸುರತ್ಕಲ್: ಕನ್ನಡ ಸಾಹಿತ್ಯ ಆಕಾಶದಲ್ಲಿ ಮುದ್ದಣ ಮಹಾಕವಿಗಳೊಂದಿಗೆ ಉಜ್ವಲ ತಾರೆಯಾಗಿ ವಿರಾಜಿಸುತ್ತಿದ್ದಾನೆ. ಬಡ ತನದ ಬೇಗೆಯಲ್ಲಿ ಬೇಯುತ್ತಿದ್ದರೂ 31 ವರ್ಷಗಳಷ್ಟೇ ಜೀವಿಸಿದ್ದರೂ ಜನರ ಮನಸ್ಸಿನಿಂದ ಅಳಿಸಲಾಗದ ಕಾವ್ಯ ಸಂಪತ್ತನ್ನು ರಚಿಸಿದ ನಂದಳಿಕೆ ಲಕ್ಷ್ಮೀ ನಾರಾಯಣಪ್ಪನವರ ಕಾರ್ಯ ಸಾಧನೆ ಬಣ್ಣಿಸಲಸದಳ ಎಂದು ಮುದ್ದಣ ಪ್ರತಿಷ್ಠಾನದ ನಿರ್ದೇಶಕ ನಂದಳಿಕೆ ಬಾಲಚಂದ್ರ ರಾವ್ ನುಡಿದರು.
ಗೋವಿಂದದಾಸ ಕಾಲೇಜು ಗ್ರಂಥಾಲಯ ಮತ್ತು ಭಾಷಾ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಂದಳಿಕೆಯ ವರಕವಿ ಮುದ್ದಣನ 150ನೇ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಮುದ್ದಣನ ಪುಸ್ತಕ ಪ್ರದರ್ಶನ, ಕವಿ ನಮನ ಮತ್ತು ಗಾನ ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕವಿ ಮುದ್ದಣನ ನೆನಪು ನಂದಳಿಕೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವುದಕ್ಕೆ ಮುದ್ದಣ ಅಧ್ಯಯನ ಕೇಂದ್ರ ಮತ್ತು ಗ್ರಂಥಾಲಯವನ್ನು ರೂಪಿಸುವ ಕಾರ್ಯ ನಡೆಯುತ್ತಿದ್ದು, ಸಾಹಿತ್ಯಾಭಿಮಾನಿಗಳು ಪ್ರೋತ್ಸಾಹಿಸಬೇಕಿದೆ ಎಂದರು.
ಮುದ್ದಣನ ಹೆಸರನ್ನು ಚಿರಸ್ಥಾಯಾಗಿಸಿ
ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿ ಮುದ್ದಣನ ಸಾಧನೆ ಅಪಾರವಾಗಿದ್ದು. ಅವರ ಕೃತಿಗಳ ಅಧ್ಯಯನದ ಮೂಲಕ ಮುದ್ದಣನ ಹೆಸರನ್ನು ಚಿರಸ್ಥಾಯಿಯಾಗಿಸಬೇಕೆಂದು ನುಡಿದರು.
ವಿದ್ಯಾರ್ಥಿನಿ ಶರಣ್ಯಾ ಮುದ್ದಣನ ಕುರಿತಾದ ಕಾವ್ಯ ನಮನವನ್ನು ನೆರವೇರಿಸಿದರು. ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ| ರಮೇಶ್ ಭಟ್ ಎಸ್.ಜಿ., ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ| ನೀಲಪ್ಪ ವಿ., ಮಾನವಿಕ ವಿಭಾಗದ ಮುಖ್ಯಸ್ಥ ಹರೀಶ್ ಆಚಾರ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ದೀಪಾ ಶೆಟ್ಟಿ, ಉಪನ್ಯಾಸಕರಾದ ಲೆ| ಸುಧಾ ಶೆಟ್ಟಿ, ಗ್ರಂಥಪಾಲೆ ಸಾವಿತ್ರಿ ಎ., ಚಂದ್ರಶೇಖರ್ ಕಬ್ಬಿನಹಿತ್ಲು ಉಪಸ್ಥಿತರಿದ್ದರು. ರಶ್ಮಿತಾ ಸ್ವಾಗತಿಸಿದರು. ಸುರಕ್ಷಾ ವಂದಿಸಿದರು. ದೀಕ್ಷಾ ನಿರೂಪಿಸಿದರು.
ಗಮಕ ವಾಚನ
ವಿದ್ಯಾರ್ಥಿ ಸಂಪತ್ ಕುಮಾರ್ ಮುದ್ದಣನ ಶ್ರೀರಾಮ ಪಟ್ಟಾಭಿಷೇಕದ ಗಮಕ ವಾಚನವನ್ನು ನಡೆಸಿಕೊಟ್ಟರು.