ಉಡುಪಿಯ ದೆಂದೂರುಕಟ್ಟೆ ಗಣೇಶೋತ್ಸವಕ್ಕೆ ಭೇಟಿ ಕೊಟ್ಟ ಮೋದಿ..!
Team Udayavani, Sep 3, 2019, 10:08 AM IST
ಕಟಪಾಡಿ: ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಯೊಂದು ವಸ್ತುವನ್ನು ತನಿಖಾದಳದವರು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದರು. ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲೂ ನೂರಾರು ಜನರು ಅದಾವುದೋ ವ್ಯಕ್ತಿಗೆ ಕಾತರದಿಂದ ಕಾಯುತ್ತಿದ್ದರು. ಅಷ್ಟರಲ್ಲೆ ಪೋಲಿಸ್ ವಾಹನದ ಸೈರನ್ ಮೊಳಗಲು ಆರಂಭವಾಯಿತು.
ಕುಳಿತಿದ್ದ ಸಾರ್ವಜನಿಕರೆಲ್ಲಾ ಧಿಗ್ಗನೆದ್ದು ರಸ್ತೆಯನ್ನೇ ನೋಡಲಾರಂಭಿಸಿದರು. ಅವರ ನಿರೀಕ್ಷಿಸುತ್ತಿದ್ದ ಸಮಯ ಬಂದೇ ಬಿಟ್ಟಿತು. ಒಮ್ಮೆಲೆ ಪೊಲೀಸರ ವೈಯರ್ ಲೆಸ್ ಫೋನಿನ ಶಬ್ಬಗಳು ಜೋರಾಗತೊಡಗಿದವು. ಅವರ ಕಣ್ಣೆದುರಿಗೆ ನಾಲ್ಕೈದು ಭದ್ರತಾ ವಾಹನಗಳು ಶರವೇಗದಲ್ಲಿ ಹಾದುಹೋದವು. ನಂತರದಲ್ಲಿ ಬಂದಂತಹ ಝಡ್ ಪ್ಲಸ್ ಭದ್ರತಾ ವಾಹನದಲ್ಲಿ ನರೇಂದ್ರ ಮೋದಿಯವರು ಕುಳಿತಲ್ಲಿಂದಲೇ ಎಲ್ಲರಡೆಗೆ ಕೈಬೀಸುತ್ತಿದ್ದರು. ಗನ್ ಹಿಡಿದ ಭದ್ರತಾ ಸಿಬ್ಬಂದಿ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ.
ಶ್ರೀ ಈಶ್ವರ ಲಿಂಗ ಸ್ಥಾಪನೆಗಾಗಿ ಋಷಿಮುನಿಗಳು ನಾಗಾ ಸಾಧು ಸನ್ಯಾಸಿಗಳು ಆಗಮಿಸಿ ಪ್ರತಿಷ್ಠಾಪನಾ ಕಾರ್ಯ ನೆರವೇರುತ್ತಿದ್ದಂತೆ ಸೂಕ್ತ ಬಂದೋಬಸ್ತಿನಲ್ಲಿ ಸಾರ್ವಜನಿಕರ ನಡುವೆಯೇ ವೇದಿಕೆಗೆ ಆಗಮಿಸಿ ಮೋದಿ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಟ್ಟ ಈಶ್ವರ ಲಿಂಗಕ್ಕೆ ಪುಷ್ಪಾರ್ಚನೆಗೈದು ನೆರೆದ ಜನಸ್ತೋಮದತ್ತ ಕೈ ಬೀಸಿದರು.
ಇಷ್ಟೆಲ್ಲಾ ಕಾರ್ಯಕ್ರಮಗಳಿಗೆ ಸಾಕ್ಷಿಯಾದದ್ದು ಉಡುಪಿ ಜಿಲ್ಲೆಯ ದೆಂದೂರುಕಟ್ಟೆ ಶ್ರೀ ಸಾರ್ವಜನಿಕ ಗಣೇಶೋತ್ಸವ. ಥೇಟ್ ನರೇಂದ್ರ ಮೋದಿಯಂತೆ ಕಾಣುತ್ತಿರುವ ಹಿರಿಯಡ್ಕ ವ್ಯಕ್ತಿ ಸದಾನಂದ ನಾಯಕ್ ಮೋದಿಯ ಮಾದರಿಯಲ್ಲಿ ಆಗಮಿಸಿ ಮನೋರಂಜನೆಯನ್ನು ನೀಡಿದರು. ನೆರೆದ ಜನಸ್ತೋಮದಿಂದ ಈ ಮನೋರಂಜನಾ ಕಾರ್ಯಕ್ರಮಕ್ಕೆ ಸಾರ್ವತ್ರಿಕವಾಗಿ ಶ್ಲಾಘನೆ ವ್ಯಕ್ತವಾಯಿತು.