ತಲ್ಲೂರು: ಬಿರುಕು ಬಿಟ್ಟ ಹೆದ್ದಾರಿ; ಏಕಮುಖ ಸಂಚಾರ
Team Udayavani, Jun 27, 2019, 5:06 AM IST
ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ತಲ್ಲೂರು ಪೇಟೆಯಿಂದ ರಾಜಾಡಿ ಸೇತುವೆಯವರೆಗಿನ ರಸ್ತೆಯ ಒಂದು ಬದಿ ಕುಸಿದಿರುವುದರಿಂದ ಆ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಈಗ ತಲ್ಲೂರು – ಹೆಮ್ಮಾಡಿಯವರೆಗೆ ಒಂದೇ ಕಡೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ರಾಜಾಡಿಯ ಹಳೆಯ ಸೇತುವೆ ದುರಸ್ತಿ ಕಾರ್ಯವೂ ಪೂರ್ಣಗೊಳ್ಳದ ಹಾಗೂ ಒಂದು ಬದಿಯ ರಸ್ತೆಯೇ ಬಿರುಕು ಬಿಟ್ಟಿರುವುದರಿಂದ ಈ ಹೆದ್ದಾರಿಯಲ್ಲಿ ಸಂಚರಿಸುವುದು ಅಪಾಯ ಎನ್ನುವ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಭೇಟಿ ನೀಡಿ ವೀಕ್ಷಿಸಿದ್ದು, ಅವರೇ ಈ ರಸ್ತೆಯಲ್ಲಿ ಸಂಚಾರ ಸಾಧ್ಯವಿಲ್ಲ. ಒಂದೇ ಮಾರ್ಗದಲ್ಲಿ ಎರಡು ಕಡೆಗಳಿಂದ ಬರುವ ವಾಹನಗಳು ತೆರಳಲು ಅನುಕೂಲ ಮಾಡಿಕೊಡ ಲಾಗಿದೆ ಎಂದವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಬಿರುಕು ಬಿಟ್ಟ ಬಗ್ಗೆ, ರಸ್ತೆ ಬದಿ ಹಾಕಲಾದ ಮಣ್ಣು ಕುಸಿದಿರುವ ಬಗ್ಗೆ ಜೂ. 25ರಂದು ‘ಉದಯವಾಣಿ’ಯು ‘ಅಪಾಯದಲ್ಲಿದೆ ರಾಷ್ಟ್ರೀಯ ಹೆದ್ದಾರಿ’ ಎನ್ನುವ ವಿಸ್ತೃತವಾದ ವರದಿಯನ್ನು ಪ್ರಕಟಿಸುವ ಮೂಲಕ ವಾಸ್ತವ ವಿಚಾರ ವನ್ನು ಬೆಳಕಿಗೆ ತಂದಿತ್ತು.
ಈಗ ಬಿರುಕು ಬಿಟ್ಟ ಹೆದ್ದಾರಿಗೆ ಜಲ್ಲಿ ಮಿಶ್ರಿತ ಮರಳನ್ನು ಹಾಕಿ ಮುಚ್ಚಲಾಗಿದೆ. ಇದಲ್ಲದೆ ಮಣ್ಣು ಹಾಗೂ ಬೃಹತ್ ಬಂಡೆ ಕಲ್ಲುಗಳನ್ನು ತಂದು ರಸ್ತೆ ಬದಿ ಹಾಕಲಾದ ಮಣ್ಣು ಮತ್ತಷ್ಟು ಕುಸಿಯದಂತೆ ದುರಸ್ತಿ ಮಾಡಲಾಗುತ್ತಿದೆ.