ತಾನು ಸಾಕಿರುವ ಎರಡು ಚಿರತೆಗಳಿಗೋಸ್ಕರ ಉಕ್ರೇನ್ನಲ್ಲಿ ಉಳಿದ ಆಂಧ್ರದ ವೈದ್ಯ
Team Udayavani, Mar 6, 2022, 9:55 PM IST
ಕೀವ್: ವ್ಯಕ್ತಿ ತನ್ನ ಜೀವಕ್ಕೇ ಅಪಾಯ ಬಂದಾಗ ಮೊದಲು ತನ್ನನ್ನು ರಕ್ಷಿಸಿಕೊಳ್ಳಲು ಗರಿಷ್ಠ ಯತ್ನ ಮಾಡುತ್ತಾನೆ, ಅದಕ್ಕಾಗಿ ಎಂತಹ ಸವಾಲುಗಳನ್ನೂ ತೆಗೆದುಕೊಳ್ಳುತ್ತಾನೆ. ಆದರೆ ಉಕ್ರೇನ್ನ ಡಾನ್ಬಾಸ್ ನಗರದಲ್ಲಿರುವ ಆಂಧ್ರಪ್ರದೇಶದ ವೈದ್ಯ ಕುಮಾರ್ ಬಂಡಿ, ತಾನು ಸಾಕಿರುವ ಎರಡು ಚಿರತೆಗಳಿಗೋಸ್ಕರ ಅಲ್ಲೇ ಉಳಿದುಕೊಂಡಿದ್ದಾರೆ.
ಎಲ್ಲರೂ ಮರಳಿ ಬಾ ಎಂದರೂ, ತಪ್ಪಿಸಿಕೊಳ್ಳಲು ಪೂರ್ಣ ಅವಕಾಶವಿದ್ದರೂ, ಅವರು ಮಾತ್ರ ಹಾಗೆ ಮಾಡಿಲ್ಲ. ತಾನು ಸತ್ತರೆ ಚಿರತೆಗಳೊಂದಿಗೆ ಸಾಯುತ್ತೇನೆ, ಬದುಕಿದರೆ ಅವುಗಳೊಂದಿಗೆ ಬದುಕುತ್ತೇನೆ ಎಂದು ತೀರ್ಮಾನಿಸಿದ್ದಾರೆ! ಈಗಾಗಲೇ ನೂರಾರು ಆಂಧ್ರ ವಿದ್ಯಾರ್ಥಿಗಳ ತೆರವಿಗೆ ಕುಮಾರ್ ನೆರವಾಗಿದ್ದಾರೆ. ತಾನೊಂದು ವೇಳೆ ಬಿಟ್ಟು ಹೊರಟರೆ, ಇಲ್ಲಿ ಚಿರತೆಗಳು ಹಸಿವಿನಿಂದ ಸಾಯುವುದು ಖಾತ್ರಿ. ಅವಕ್ಕೆ ಆಹಾರ ನೀಡುವವರು ಯಾರೂ ಇಲ್ಲ, ಆದ್ದರಿಂದ ಎಂತಹದ್ದೇ ಸ್ಥಿತಿಯಲ್ಲಿ ನಾನವುಗಳನ್ನು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಕುಮಾರ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಜಿಲ್ಲೆಯ, ತನುಕು ನಗರದವರು. ವಿಶೇಷವೆಂದರೆ ಇವರು ಯೂಟ್ಯೂಬರ್ ಆಗಿಯೂ ಹೆಸರು ಮಾಡಿದ್ದಾರೆ.ಎರಡು ಉಕ್ರೇನಿ ಸಿನಿಮಾಗಳಲ್ಲೂ ಅವರ ಪಾತ್ರವಿದೆ. ತಮಿಳು, ತೆಲುಗು, ಮಲಯಾಳಂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.