ಹಿಜಾಬ್ ವಿಚಾರ ಮರೆಮಾಚಲು ಕಾಂಗ್ರೆಸ್ ನಾಟಕ : ಆರ್. ಅಶೋಕ್
Team Udayavani, Feb 18, 2022, 10:30 PM IST
ಬೆಂಗಳೂರು: ಹಿಜಾಬ್ ವಿಚಾರ ಮರೆ ಮಾಚಲು ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಧರಣಿ ಕಟಪ ನಾಟಕವಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಎಲ್ಲಿ ಸದನದಲ್ಲಿ ಚರ್ಚೆ ಆಗಲಿದೆ ಅಂತ ಹೆದರಿ, ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಕಲಾಪ ನಡೆಸಲು ಬಿಡದೆ ಗಲಾಟೆ ಮಾಡುತ್ತಿದ್ದಾರೆ. ಜೆಡಿಎಸ್ ಸದಸ್ಯರೂ ಕೂಡ ಶಿಕ್ಷಣ ವಿಚಾರವಾಗಿ ಚರ್ಚೆ ಮಾಡಲು ತಯಾರಿದ್ದಾರೆ. ಈಗಾಗಲೇ ವಿಚಾರ ಮಂಡನೆ ಕೂಡ ಮಾಡಿದ್ದಾರೆ. ಕಾಂಗ್ರೆಸ್ಗೆ ಅವರ ಹಗರಣ ಎಲ್ಲಿ ಚರ್ಚೆ ಮಾಡ್ತಾರೆ ಅನ್ನೋ ಭಯ ಇದೆ. ಹೀಗಾಗಿ ಈಶ್ವರಪ್ಪ ಅವರ ರಾಜೀನಾಮೆ ವಿಚಾರ ಪಟ್ಟು ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನವರು ಕೇಸರಿ ಹಿಡಿದರೆ ಅಲ್ಪಸಂಖ್ಯಾತರ ಓಟ್ ಹೋಗುತ್ತದೆ. ಹಿಜಾಬ್ ಹಿಡಿದರೆ ಹಿಂದೂಗಳು ದೂರ ಹೋಗುತ್ತಾರೆ. ಹೀಗಾಗಿ ಹೆದರಿ ಈ ರೀತಿ ಮಾಡುತ್ತಿದ್ದಾರೆ. ಇವರ ಇಚ್ಚೆ ಬಂದಂತೆ ಮಾಡಲು ವಿಧಾನಸೌಧ ಕಟ್ಟಿಲ್ಲ. ದಿನನಿತ್ಯ ನೂರಾರು ಕೋಟಿ ಪೋಲಾಗುತ್ತಿದೆ. ಇಡೀ ರಾಜ್ಯದ ಜನ ಏನಾದರೂ ನಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿ, ಏನಾದರೂ ಪರಿಹಾರ ಕೊಡುತ್ತಾರಾ ಅಂತಾ ಕಾಯುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಅಧಿವೇಶನದಲ್ಲಿ ಭಾಗಿಯಾಗಲಿ. ಇದು ಕುಸ್ತಿ ಮಾಡೋ ಜಾಗ ಅಲ್ಲ, ಸದನದಲ್ಲಿ ಚರ್ಚೆ ಮಾಡಲಿ.. ಇನ್ನು ಏಳು ದಿನ ಇದೆ, ಜನರ ಧ್ವನಿಯಾಗಿ ವಿಪಕ್ಷವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.