ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ
ಕಣ್ಗಾವಲಿಗೆ ಕೇಂದ್ರ ಅರಣ್ಯ, ಪರಿಸರ ಇಲಾಖೆ ಸೂಚನೆ
Team Udayavani, Apr 7, 2020, 6:15 AM IST
ಬೆಂಗಳೂರು: ಕಾಡುಪ್ರಾಣಿಗೂ ಕೋವಿಡ್ 19 ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಾಣಿ ಸಂಗ್ರಹಾಲಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಜತೆಗೆ ಸಿಸಿ ಕೆಮರಾ ಅಳವಡಿಸಿ ಎಲ್ಲ ಪ್ರಾಣಿಗಳನ್ನು ಕಣ್ಗಾವಲಿನಲ್ಲಿರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸೂಚಿಸಿದೆ.
ಅಮೆರಿಕದ ಪ್ರಾಣಿ ಸಂಗ್ರಹಾಲಯದ ಹುಲಿಯೊಂದಕ್ಕೆಕೋವಿಡ್ 19 ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ರಾಜ್ಯದ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಪ್ರಾಣಿಗಳ ಮೇಲೆ ಸಿಬಂದಿ ಸದಾ ನಿಗಾ ಇರಿಸಬೇಕು. ಯಾವುದೇ ಪ್ರಾಣಿಯಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ತತ್ಕ್ಷಣ ಅದನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಬೇಕು. ಜತೆಗೆ, ಪ್ರಾಣಿಗಳನ್ನು ನಿರ್ವಹಣೆ ಮಾಡುವವರು ಕಡ್ಡಾಯವಾಗಿ ಮುಂಜಾಗ್ರತೆ ವಹಿಸಬೇಕು ಎಂಬುದಾಗಿ ಸೂಚಿಸಲಾಗಿದೆ.
ಕೋವಿಡ್ 19 ವೈರಸ್ ಪ್ರಾಣಿಗಳ ಮೂಲಕ ಮಾನವನಿಗೆ ಮತ್ತು ಮಾನವನಿಂದ ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಉದ್ಯಾನ, ಹುಲಿ ಅಭಯಾರಣ್ಯಗಳಿಗೆ ಮಾನವ ಪ್ರವೇಶ ನಿರ್ಬಂಧಿಸುವಂತೆ ಇಲಾಖೆ ಸೂಚಿಸಿದೆ.
ಲಕ್ಷಣ ಕಂಡುಬಂದರೆ ಪರೀಕ್ಷೆ
ಯಾವುದೇ ಪ್ರಾಣಿಗೆ ಕೋವಿಡ್ 19 ಲಕ್ಷಣ ಕಂಡು ಬಂದಲ್ಲಿ ತತ್ಕ್ಷಣ ಅವುಗಳ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲದಲ್ಲಿರುವ ರಾಷ್ಟ್ರೀಯ ಪ್ರಾಣಿಗಳ ಭದ್ರತಾ ಸಂಸ್ಥೆ, ಹರಿಯಾಣದ ನ್ಯಾಷನಲ್ ರಿಸರ್ಚ್ ಸೆಂಟರ್ ಅನ್ ಈಕ್ವಿನಸ್ (ಎನ್ಆರ್ಸಿಇ), ಬರೇಲಿಯದ ಪಶು ರೋಗಗಳ ಸಂಶೋಧನ ಕೇಂದ್ರಕ್ಕೆ ರವಾನಿಸಿ ವರದಿ ಪಡೆದುಕೊಳ್ಳಬೇಕು ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸೂಚಿಸಿದೆ.