ಕಮಾಂಡರ್ ಕಮಾಲ್ : ಕೋವಿಡ್ ನಿಯಂತ್ರಣಕ್ಕೆ ಡಿ.ಸಿ.ಗಳ ದಿಟ್ಟ ಹೆಜ್ಜೆ , ಸೋಂಕಿಗೆ ಲಗಾಮು
Team Udayavani, May 24, 2021, 7:20 AM IST
ಜಿಲ್ಲಾಧಿಕಾರಿಗಳು ಈಗ ತಮ್ಮ ನಿಜವಾದ “ಪವರ್’ ತೋರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗಳೇ ವಹಿಸಿಕೊಳ್ಳಬೇಕು ಎಂಬ ಪ್ರಧಾನಿ ಮೋದಿ ಅವರ ಕರೆ “ಫಲ’ ಕೊಡಲಾರಂಭಿಸಿದೆ. ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟಿಬದ್ಧರಾಗಿ ನಿಂತು ಕೈಗೊಂಡ ವಿನೂತನ ಕ್ರಮ, ಆಸಕ್ತಿ, ಮುತುವರ್ಜಿಯಿಂದಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ “ಮಾದರಿ’ ಜಿಲ್ಲಾಧಿಕಾರಿಗಳ ಯಶೋಗಾಥೆ ಇಲ್ಲಿದೆ.
ಮೈಸೂರು
ಯಶಸ್ವಿ ಕೋವಿಡ್ ಮಿತ್ರ
ಜಿಲ್ಲಾಧಿಕಾರಿ: ರೋಹಿಣಿ ಸಿಂಧೂರಿ
ಸೋಂಕು ಸಮುದಾಯಕ್ಕೆ ಹರಡಿದ ಬೆನ್ನಲ್ಲೇ ಮೈಸೂರು ಜಿಲ್ಲಾಡಳಿತ “ಕೋವಿಡ್ ಮಿತ್ರ’ ಯೋಜನೆ ಆರಂಭಿಸಿತು. ರೋಗ ಲಕ್ಷಣ ಇರುವವರಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿ, ಸೋಂಕು ಹರಡದಂತೆ ಕೈಗೊಂಡ ಕ್ರಮ ರಾಜ್ಯಕ್ಕೆ ಮಾದರಿ. ಜಿಲ್ಲೆಯ ಎಲ್ಲ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಲಾಗಿದೆ.
ಉಡುಪಿ
ಸೋಂಕುಪೀಡಿತರ ಮನೆಗೆ ಭೇಟಿ
ಜಿಲ್ಲಾಧಿಕಾರಿ: ಜಿ. ಜಗದೀಶ್
ಜಿಲ್ಲಾಧಿಕಾರಿ ಕೊರೊನಾ ಸೋಂಕು ಪೀಡಿತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮ ಇಡೀ ತಂಡ ಈ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ. ಸೋಂಕುಪೀಡಿತರ ಮನೆ ಸೀಲ್ಡೌನ್ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಸೋಂಕುಪೀಡಿತರ ಕೈಗೆ ಮೊಹರು ಹಾಕಲಾಗುತ್ತಿದೆ.
ದಕ್ಷಿಣ ಕನ್ನಡ
“ಮೂರು ಟಿ’ ಸೂತ್ರಕ್ಕೆ ಒತ್ತು
ಜಿಲ್ಲಾಧಿಕಾರಿ: ಡಾ| ಕೆ.ವಿ. ರಾಜೇಂದ್ರ
ಸರಕಾರದ ಕಠಿನ ನಿರ್ಬಂಧ ಜಾರಿಗೆ ಬರುವ ಮೊದಲೇ ದ.ಕ.ದಲ್ಲಿ ಬೆಳಗ್ಗೆ 6ರಿಂದ 9ರ ನಡುವಣ ಅವಧಿಯಲ್ಲಿ ಮಾತ್ರ ಆವಶ್ಯಕ ವಸ್ತು ಖರೀದಿಗೆ ಅವಕಾಶ ನೀಡಿ ಆ ಬಳಿಕ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿತ್ತು. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ಎಂಬ “3 ಟಿ’ ಸೂತ್ರಕ್ಕೆ ಜಿಲ್ಲಾಧಿಕಾರಿ ವಿಶೇಷ ಒತ್ತು ನೀಡಿದ್ದಾರೆ.
ಚಿಕ್ಕಬಳ್ಳಾಪುರ
ಸಿಎಸ್ಆರ್ ನಿಧಿಯಿಂದ ಆಮ್ಲಜನಕ
ಜಿಲ್ಲಾಧಿಕಾರಿ: ಆರ್. ಲತಾ
ಖಾಸಗಿ ಕಂಪೆನಿಗಳಿಂದ ಸಿಎಸ್ಆರ್ ನಿ ಧಿ ಸಂಗ್ರಹಿಸಿ ಆಮ್ಲಜನಕ ಉತ್ಪಾದನ ಘಟಕ ನಿರ್ಮಿಸಲು ಜಿಲ್ಲಾಧಿಕಾರಿ ಆರ್. ಲತಾ ಯೋಜನೆ ರೂಪಿಸಿದ್ದಾರೆ. ಜಿಲ್ಲಾ ಕೇಂದ್ರ ಸಹಿತ ತಾಲೂಕಿನ 7 ಕೋವಿಡ್ ಆಸ್ಪತ್ರೆಗಳಲ್ಲಿ ಇಂಥ ಆಮ್ಲಜನಕ ಉತ್ಪಾದಕ ಘಟಕ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ತುಮಕೂರು
ಮನೆ ಮನೆ ಭೇಟಿ
ಜಿಲ್ಲಾಧಿಕಾರಿ: ವೈ.ಎಸ್. ಪಾಟೀಲ್
ಡಿ.ಸಿ. ಮತ್ತವರ ತಂಡ ಸೋಂಕು ಪೀಡಿತರ ಮನೆಗೆ ತೆರಳಿ ಧೈರ್ಯ ಹೇಳುತ್ತಿ ದ್ದಾರೆ. ಜಿಲ್ಲೆಯ ರೆಡ್ ಝೋನ್ ಮತ್ತು ಹಾಟ್ಸ್ಪಾಟ್ ಗ್ರಾಮಗಳಿಗೆ ಭೇಟಿ ನೀಡಿ ಸೋಂಕುಪೀಡಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬುತ್ತಿದ್ದಾರೆ. ಕೋವಿಡ್ ಔಷಧ ಕಿಟ್ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಬಳ್ಳಾರಿ, ವಿಜಯನಗರ
ಕುಟುಂಬ ಆರೋಗ್ಯ ಸಂರಕ್ಷಣ ತಂಡ
ಜಿಲ್ಲಾಧಿಕಾರಿ: ಪವನ್ಕುಮಾರ್ ಎಂ.
ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ಜಿ.ಪಂ. ಕೈಗೊಂಡಿರುವ ಕುಟುಂಬ ಆರೋಗ್ಯ ಸಂರಕ್ಷಣ ತಂಡ ರಚನೆ ಈಗ ರಾಜ್ಯಕ್ಕೆ ವಿಸ್ತರಣೆಯಾಗಿದೆ. ಪ್ರತೀ 50 ಕುಟುಂಬಕ್ಕೆ ಒಬ್ಬ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಇವರು ನಿಗದಿತ 50 ಕುಟುಂಬಗಳ ಆರೋಗ್ಯ ಸ್ಥಿತಿಯ ಸಮೀಕ್ಷೆ ನಡೆಸಿ ನಿತ್ಯ ವಿಚಾರಿಸುತ್ತಾರೆ.
ಬೀದರ್
ಕೆಮರಾ ಕಣ್ಗಾವಲು
ಜಿಲ್ಲಾಧಿಕಾರಿ: ರಾಮಚಂದ್ರನ್ ಆರ್.
ಬಿಮ್ಸ್ ಆಸ್ಪತ್ರೆಯ ಎಲ್ಲ ಕಡೆ ಸಿಸಿ ಕೆಮರಾ ಅಳವಡಿಕೆ ಮತ್ತು ವಾರ್ ರೂಂ ಸ್ಥಾಪನೆಯ ವಿನೂತನ ಪ್ರಯೋಗ ಮಹತ್ವದ ಪಾತ್ರ ವಹಿಸುತ್ತಿದೆ. ಸೋಂಕುಪೀಡಿತರ ಬಳಿಗೆ ವೈದ್ಯರು ಹೋಗದೆ ನರ್ಸ್ಗಳನ್ನು ಮಾತ್ರ ಕಳುಹಿಸಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡ ಈ ಪ್ರಯೋಗ ಯಶ ಪಡೆದಿದೆ.
ರಾಯಚೂರು
ವಾರ್ಡ್ವಾರು ಸಮಿತಿ
ಜಿಲ್ಲಾಧಿಕಾರಿ: ಆರ್. ವೆಂಕಟೇಶ ಕುಮಾರ್
ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಜತೆಗೆ ವಾರ್ಡ್ವಾರು ಸಮಿತಿ ರಚಿಸಲಾಗಿದೆ. ಬೇಕಾಬಿಟ್ಟಿ ಚಿಕಿತ್ಸೆ ನೀಡು ತ್ತಿರುವ ನಕಲಿ ವೈದ್ಯರ ಪತ್ತೆ ಕೂಡ ಈ ಸಮಿತಿಯ ಪ್ರಮುಖ ಕೆಲಸ. ಈಗಾಗಲೇ ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಿದ್ಧಗೊಂಡಿದ್ದು, ಅದರ ಜತೆಗೆ ಈ ವಾರ್ಡ್ ವಾರು ಸಮಿತಿಗಳು ಶ್ರಮಿಸುತ್ತಿವೆ.
ಧಾರವಾಡ
ಕೊರೊನಾ ಮುಕ್ತ ಗ್ರಾಮ ಅಭಿಯಾನ
ಜಿಲ್ಲಾಧಿಕಾರಿ: ನಿತೇಶ ಪಾಟೀಲ
ಕೊರೊನಾ ಮುಕ್ತ ಗ್ರಾಮ ಅಭಿಯಾನ ಆರಂಭವಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲ ಜನಪ್ರತಿನಿಧಿ ಗಳನ್ನು ಒಳಗೊಂಡ ಸಮಿತಿಯ ಸಹಯೋಗದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊರೊನಾ ಮುಕ್ತ ಗ್ರಾಮಕ್ಕೆ ಪ್ರಶಸ್ತಿ, ಇದಕ್ಕೆ ಶ್ರಮಿಸುವ ಅಧಿಕಾರಿ, ಅಧ್ಯಕ್ಷರಿಗೂ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.