ಭಯೋತ್ಪಾದಕ ಶಾರಿಕ್ ನಿಮ್ಮ ಜೋಡೆತ್ತಾ?: ಡಿಕೆಶಿ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ
Team Udayavani, Dec 15, 2022, 9:40 PM IST
ಬೆಂಗಳೂರು: ಓಟ್ ಬ್ಯಾಂಕ್ಗಾಗಿ ಅಮಾಯಕರ ಜೀವ ತೆಗೆಯುವವರನ್ನು ಸಮರ್ಥಿಸುವ ನೀವು ಜನನಾಯಕರೇ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ.ರವಿ, ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮಂಗಳೂರಿನ ಕುಕ್ಕರ್ ಭಯೋತ್ಪಾದಕ ಶಾರಿಕ್ ನಿಮ್ಮ ಜೋಡೆತ್ತಾ? ನಿಮ್ಮ ಹೇಳಿಕೆ ತುಷ್ಟೀಕರಣದ ತುತ್ತ ತುದಿ ಎನ್ನಬೇಕೆ ಅಥವಾ ನಿಮ್ಮ ನೈತಿಕ ಪತನದ ತಳಪಾಯ ಅನ್ನೋಣವೇ? ನಿಮ್ಮ ಹಾಗೂ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಗುದ್ದಾಟ ಜನಜನಿತವಾಗಿದೆ. ಸಿದ್ದರಾಮಯ್ಯ ಅವರು ಹಳೆಯ ಭಯೋತ್ಪಾದಕ ಟಿಪ್ಪುವಿನ ಜಪ ಮಾಡುತ್ತಾ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಓಲೈಕೆ ರಾಜಕಾರಣದಲ್ಲಿ ನೀವು ಸಿದ್ದರಾಮಯ್ಯ ಅವರನ್ನು ಮೀರಿಸುವ ಕುಕ್ಕರ್ ಭಯೋತ್ಪಾದಕ ಕೈ ಹಿಡಿದಿದ್ದೀರಿ. ನಿಮ್ಮ ಹೇಳಿಕೆ ಕರ್ನಾಟಕದ ಪ್ರಬುದ್ಧ ರಾಜಕಾರಣಕ್ಕೆ ಕಪ್ಪುಚುಕ್ಕೆ ಎಂದು ಹೇಳಿದ್ದಾರೆ.