ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅಂಫಾನ್ ಚಂಡಮಾರುತದ ಆತಂಕ
Team Udayavani, May 16, 2020, 5:45 AM IST
ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ “ಅಂಫಾನ್’ ಎಂಬ ಹೆಸರಿನ ಚಂಡ ಮಾರುತ ಸೃಷ್ಟಿಯಾಗಿರುವುದರಿಂದ ಕರಾವಳಿ ಭಾಗದಲ್ಲಿ ಭೀತಿ ಎದುರಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಈ ಬಾರಿಯ ಮುಂಗಾರು ವಿಳಂಬವಾಗಿ ಜೂನ್ 5ಕ್ಕೆ ಕೇರಳ ಕರಾವಳಿ ತೀರ ವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿ ತೀರ ಪ್ರವೇಶಿಸಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಸಹಿತ ದಕ್ಷಿಣ ಒಳನಾಡಿನಲ್ಲಿ ನೀರಿಕ್ಷೆಯಂತೆ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆಯಿದೆ. ಆದರೆ ಚಂಡಮಾರುತ ಪ್ರಭಾವ ಈ ತಿಂಗಳಾಂತ್ಯದವರೆಗೆ ಇದ್ದರೆ ಮುಂಗಾರು ಪ್ರವೇಶಿಸುವಲ್ಲಿ ವಿಳಂಬವಾಗಬಹುದು ಎನ್ನುತ್ತಾರೆ ಹವಾಮಾನ ತಜ್ಞರು.
ಸದ್ಯದ ಮಾಹಿತಿಯ ಪ್ರಕಾರ ಮೇ 18ರಂದು ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ. ಈ ಚಂಡಮಾರುತದ ಹಿನ್ನೆ ಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ “ಯಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದ್ದು, ಮುಂಬರುವ ಮುಂಗಾರು ಪ್ರವೇಶಕ್ಕೆ ಚಂಡಮಾರುತ ಪರಿಣಾಮ ಬೀರಬ ಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ ಉಂಟಾದರೆ, ಇತ್ತ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ (ಟ್ರಫ್) ನಿರ್ಮಾಣವಾಗಿದೆ. ಇದೇ ಕಾರಣದಿಂದ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಕರಾ ವಳಿ ಭಾಗಕ್ಕೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆಯ ವಾಡಿಕೆ ಯಂತೆ ಮಾರ್ಚ್ನಿಂದ ಮೇವರೆಗೆ ಸುರಿಯುವ ಪೂರ್ವ ಮುಂಗಾರು ಮಳೆ ಕರಾವಳಿಯಲ್ಲಿ ಉತ್ತಮ ಆರಂಭ ಪಡೆದಿದೆ. ಮಾ. 1ರಿಂದ ಮೇ 15ರ ವರೆಗಿನ ಅಂಕಿ ಅಂಶದಂತೆ ದ.ಕ. ಜಿಲ್ಲೆಯಲ್ಲಿ 113 ಮಿ.ಮೀ. ವಾಡಿಕೆ ಮಳೆಯಲ್ಲಿ 139 ಮಿ.ಮೀ. ಮಳೆಯಾಗಿ ಶೇ. 23ರಷ್ಟು ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ 73 ಮಿ.ಮೀ. ವಾಡಿಕೆ ಮಳೆಯಲ್ಲಿ 116 ಮಿ.ಮೀ. ಮಳೆಯಾಗಿ ಶೇ. 60ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಅದೇ ರೀತಿ ಉ.ಕ. ಜಿಲ್ಲೆಯಲ್ಲಿ 51 ಮಿ.ಮೀ. ವಾಡಿಕೆ ಮಳೆಯಲ್ಲಿ 82 ಮಿ.ಮೀ. ಮಳೆಯಾಗಿ ಶೇ. 60ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ.
ಎರಡು ವರ್ಷ
ಉತ್ತಮ ಮುಂಗಾರು
ಕಳೆದ ಬಾರಿ ರಾಜ್ಯ ಕರಾವಳಿಗೆ ವಾಡಿಕೆಗಿಂತ ತಡವಾಗಿ ಅಂದರೆ ಜೂನ್ 14ರಂದು ಮುಂಗಾರು ಪ್ರವೇಶ ಪಡೆದಿತ್ತು. ಎರಡು ವರ್ಷಗಳಿಂದ ಕರಾವಳಿಯಲ್ಲಿ ಮುಂಗಾರು ಉತ್ತಮವಾಗಿತ್ತು. 2018ರಲ್ಲಿ ಶೇ.3ರಷ್ಟು ಮತ್ತು 2019ರಲ್ಲಿ ಶೇ.24ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.
ವಿಳಂಬ ಸಾಧ್ಯತೆ
ಬಂಗಾಲಕೊಲ್ಲಿಯಲ್ಲಿ ಚಂಡ ಮಾರುತ ಮತ್ತು ಅರಬ್ಬಿ ಸಮುದ್ರ ದಲ್ಲಿ ನಿಮ್ನ ಒತ್ತಡ ಪರಿಣಾಮ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ಮೇ ಅಂತ್ಯಕ್ಕೆ ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಬಂಗಾಲಕೊಲ್ಲಿಯಲ್ಲಿ ಪ್ರಭಾವ ಬೀರುತ್ತಿರುವ ಚಂಡಮಾರುತದ ಪರಿ ಣಾಮ ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಪ್ರವೇಶ ಪಡೆಯಬಹುದು.
-ಸುನಿಲ್ ಗವಾಸ್ಕರ್
ಕೆಎಸ್ಎನ್ಡಿಎಂಸಿ ವಿಜ್ಞಾನಿ