ಅನರ್ಹರಿಗೆ ಢವ.. ಢವ..
ಸುಪ್ರೀಂ ಕೋರ್ಟ್ನಲ್ಲಿ ಇಂದು ತೀರ್ಪು
Team Udayavani, Nov 13, 2019, 6:30 AM IST
ಬೆಂಗಳೂರು: ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬುಧವಾರ ಹೊರಬೀಳಲಿದ್ದು, ಅನರ್ಹಗೊಂಡಿರುವ ಹದಿನೇಳು ಶಾಸಕರು ಹಾಗೂ ಮೂರೂ ರಾಜಕೀಯ ಪಕ್ಷಗಳಲ್ಲಿ ತಳಮಳ ಸೃಷ್ಟಿಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮಂಗಳವಾರ ಸಂಜೆಯೇ ದಿಲ್ಲಿ ತಲುಪಿದ್ದಾರೆ. ಈಗಾಗಲೇ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು ನಾಮಪತ್ರ ಸಲ್ಲಿಕೆ ಆರಂಭಗೊಂಡು ಎರಡು ದಿನ ಕಳೆದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಉಪ ಚುನಾವಣೆ ನಡೆಯುತ್ತದೆಯೊ ಅಥವಾ ಮುಂದೂಡಿಕೆಯಾಗುತ್ತದೆಯೊ? ಒಂದೊಮ್ಮೆ ಚುನಾವಣೆ ನಡೆದದ್ದೇ ಆದರೆ ಅನರ್ಹಗೊಂಡವರು ಸ್ಪರ್ಧೆ ಮಾಡಬಹುದಾ? ಎಂಬುದು ಸ್ಪಷ್ಟಗೊಳ್ಳಲಿದೆ.
ಅನರ್ಹಗೊಂಡಿರುವವರಿಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲು ಒಲ್ಲದ ಮನಸ್ಸಿನಿಂದ ಸಿದ್ಧವಿದ್ದರಾದರೂ ಇದರಿಂದ ಬೇರೆ ರೀತಿಯ ಸವಾಲು ಎದುರಾಗ ಲಿದೆ. ಅನರ್ಹಗೊಂಡಿರುವ 17 ಮಂದಿ ಶಾಸಕರ ಪೈಕಿ ಕಾಗವಾಡದ ಶ್ರೀಮಂತ ಪಾಟೀಲ್, ರಾಣೆಬೆನ್ನೂರಿನ ಶಂಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಮ್ಮನ್ನು ಅನರ್ಹ ಮಾಡಿರುವುದು ಸರಿಯಲ್ಲ ಎಂದು ಕೋರ್ಟ್ಗೆ ಮೊರೆ ಹೋಗಿದ್ದಾರೆ.