ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ
Team Udayavani, Apr 9, 2020, 7:10 PM IST
ಬೆಂಗಳೂರು: ರಾಜ್ಯ ಸರಕಾರ ಕೋವಿಡ್ 19 ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತ ಆಹಾರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸರಕಾರ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ನೀಡುವ ಸಂದರ್ಭದಲ್ಲಿ 7-8 ಸಾವಿರ ಜನರು ಆಹಾರ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಹಣ ಪಡೆದು ಆಹಾರ ನೀಡುತ್ತಿರುವುದರಿಂದ 150 ಮಂದಿಯೂ ಬರುತ್ತಿಲ್ಲ. ಹೀಗಾಗಿ ಸರಕಾರ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆಯಲ್ಲೂ ಸಾಕಷ್ಟು ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಎಲ್ಲ ಯೋಜನೆಗಳಲ್ಲಿಯೂ ಈ ರೀತಿಯ ಲೋಪಗಳು ಕಂಡು ಬರುತ್ತವೆ. ಯಾರು ಕಾಳಸಂತೆಯಲ್ಲಿ ವ್ಯವಹಾರ ಮಾಡುತ್ತಾರೋ ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಲಾಕ್ಡೌನ್ನನ್ನು ಇನ್ನಷ್ಟು ದಿನ ಮುಂದುವರಿಸುವ ಬಗ್ಗೆ ಆಕ್ಷೇಪವಿಲ್ಲ. ಸರಕಾರ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಮ್ಮ ಸಹಮತವಿದೆ. ಕೋವಿಡ್ 19 ಸೋಂಕು ತಗಲಿದ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವ ಜಿಲ್ಲೆಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು. ನಾವು ನೀಡಿರುವ ಸಲಹೆಗಳನ್ನು ಸರಕಾರ ಸರಿಯಾಗಿ ಸ್ವೀಕರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.