ಶಂಕಿತ ಬೌಲಿಂಗ್ ಶೈಲಿ ಆರೋಪದಿಂದ ಸುನೀಲ್ ನಾರಾಯಣ್ ದೋಷಮುಕ್ತ: ನಿಟ್ಟುಸಿರುಬಿಟ್ಟ ಕೆಕೆಆರ್
Team Udayavani, Oct 18, 2020, 9:32 PM IST
ಅಬುಧಾಬಿ: ಈ ಬಾರಿ ಐಪಿಎಲ್ನಲ್ಲಿ ಶಂಕಿತ ಬೌಲಿಂಗ್ ಶೈಲಿ ಆರೋಪಕ್ಕೆ ಒಳಗಾಗಿದ್ದ ಕೋಲ್ಕತ ಸ್ಪಿನ್ನರ್ ಸುನೀಲ್ ನಾರಾಯಣ್ ದೋಷಮುಕ್ತರಾಗಿದ್ದಾರೆ.
ಅವರ ಬೌಲಿಂಗ್ನ ವಿಡಿಯೋಗಳನ್ನು ಪರಿಶೀಲಿಸಿದ ಶಂಕಿತ ಬೌಲಿಂಗ್ ಕ್ರಿಯಾಸಮಿತಿ, ಎಲ್ಲವೂ ಸರಿಯಾಗಿದೆ ಎಂದು ಹೇಳಿದೆ. ಚೆಂಡನ್ನು ಎಸೆಯುವ ರೀತಿ, ನಿಯಮಗಳಿಗನುಗುಣವಾಗಿಯೇ ಇದೆ ಎಂದು ಅದು ವರದಿ ನೀಡಿರುವುದರಿಂದ ಕೋಲ್ಕತ ನೈಟ್ ರೈಡರ್ಸ್ ತಂಡ ನಿಟ್ಟುಸಿರುಬಿಟ್ಟಿದೆ. ಐಪಿಎಲ್ನ ಎಚ್ಚರಿಕೆ ವಹಿಸಬೇಕಾದ ಬೌಲರ್ಗಳ ಪಟ್ಟಿಯಿಂದ ಅವರು ಹೊರಬಿದ್ದಿದ್ದಾರೆ. ಪಂಜಾಬ್ ಮತ್ತು ಕೋಲ್ಕತ ನಡುವಿನ ಪಂದ್ಯದ ವೇಳೆ ಅವರ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಈ ನಡುವೆ ಇನ್ನೊಂದು ದೂರು ಅವರ ವಿರುದ್ಧ ಕೇಳಿಬಂದರೆ ಈ ಕೂಟದಲ್ಲಿ ಅವರು ಬೌಲಿಂಗ್ ಮಾಡುವುದು ಅಸಾಧ್ಯವಾಗುತ್ತಿತ್ತು. ಅಷ್ಟಕ್ಕೂ ಮುನ್ನವೇ ಅವರ ಬೌಲಿಂಗ್ ಶೈಲಿ ಸಕ್ರಮ ಎಂದು ಸಾಬೀತಾಗಿದೆ. 2015ರಲ್ಲಿ ಅವರ ಬೌಲಿಂಗ್ ಶೈಲಿ ತಪ್ಪು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯೇ ಹೇಳಿತ್ತು. 2016ರಲ್ಲಿ ಅವರು ತಮ್ಮ ದೋಷಗಳನ್ನು ತಿದ್ದಿಕೊಂಡ ನಂತರ ಮತ್ತೆ ಬೌಲಿಂಗ್ ಮಾಡಲು ಅನುಮತಿ ಪಡೆದಿದ್ದರು. 2018ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ ವೇಳೆಯೂ ಅವರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನಗಳು ಕೇಳಿಬಂದಿದ್ದವು.
ಇದನ್ನೂ ಓದಿ:ಗುವಾಹಟಿಯಲ್ಲಿ ವಿಜಯಪುರದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಸಾವು