ವಿಮಾನಯಾನ ಮೂಲ ಸೌಕರ್ಯ ಯೋಜನೆ ತ್ವರಿತಗತಿ ಅನುಷ್ಠಾನಕ್ಕೆ : ಸಿಎಂಗೆ ಸಚಿವ ಸಿಂಧಿಯಾ ಪತ್ರ
Team Udayavani, Aug 27, 2021, 11:00 PM IST
ನವ ದೆಹಲಿ : ಕರ್ನಾಟಕದಲ್ಲಿ ವಾಯುಯಾನ ಮೂಲಸೌಕರ್ಯ ಯೋಜನೆಗಳ ತ್ವರಿತಗತಿ ಅನುಷ್ಠಾನಕ್ಕೆ ನೆರವು ನೀಡುವಂತೆ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮುಂದಿನ 4-5 ವರ್ಷಗಳಲ್ಲಿ ದೇಶಾದ್ಯಂತ 20 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಹಾಕಿಕೊಂಡಿದೆ. ಕರ್ನಾಟಕದಲ್ಲೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಅಗತ್ಯವಿರುವ ಭೂಮಿ, ಅವುಗಳ ಸ್ವಾಧೀನ ಪ್ರಕ್ರಿಯೆ ಮತ್ತಿತರ ಅವಶ್ಯಕತೆಯನ್ನು ಆದಷ್ಟು ಬೇಗ ರಾಜ್ಯ ಸರ್ಕಾರ ಬಗೆಹರಿಸಿಕೊಡಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ 370 ಎಕರೆ ಭೂಮಿ ಕೇಳಲಾಗಿದೆ. ಆದರೆ 348.6 ಎಕರೆಗಳು ಮಾತ್ರ ಸಿಕ್ಕಿದೆ. ಹಾಗೆಯೇ ಮೈಸೂರು ವಿಮಾನ ನಿಲ್ದಾಣಕ್ಕಾಗಿ 240 ಎಕರೆ ಕೇಳಲಾಗಿದೆ. ಆದರೆ, ಭೂಮಿಯನ್ನು ಇನ್ನೂ ಸರ್ಕಾರ ಹಸ್ತಾಂತರಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಶಿವಮೊಗ್ಗ ಹಾಗೂ ವಿಜಯಪುರದ ವಿಮಾನನಿಲ್ದಾಣಗಳನ್ನು ಆದಷ್ಟು ಬೇಗ ಕಾರ್ಯಗತ ಮಾಡಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಉಡಾನ್ ಯೋಜನೆಯಡಿ ಸ್ವೀಕರಿಸಲಾದ ಬಿಡ್ ಗಳನ್ನು ಇದಕ್ಕಾಗಿ ಪರಿಗಣಿಸಬೇಕು ಎಂದೂ ಸಿಂಧಿಯಾ ಕೋರಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ವೈರಲ್ ಫಿವರ್ ಭೀತಿ : ಜನರ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ