ಮತದಾನ ಹಿನ್ನೆಲೆ : ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಬಂದೋಬಸ್ತ್
Team Udayavani, May 10, 2023, 7:50 AM IST
ಮಂಗಳೂರು: ಮತದಾನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಬಂದೋ ಬಸ್ತ್ ಏರ್ಪಡಿಸಲಾಗಿದ್ದು 4,500ಕ್ಕೂ ಅಧಿಕ ಪೊಲೀಸ್/ಅರೆಸೇನಾ ಪಡೆಯ ಅಧಿಕಾರಿ, ಸಿಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ 10 ಅಂತಾರಾಜ್ಯ, 7 ಅಂತರ್ ಜಿಲ್ಲಾ, 9 ಸ್ಥಳೀಯ ಚೆಕ್ಪೋಸ್ಟ್ ಗಳಿದ್ದು ಅಂತಾರಾಜ್ಯ ಚೆಕ್ಪೋಸ್ಟ್ಗಳಲ್ಲಿ ಕೇಂದ್ರ ಅರೆಸೇನಾ ಪಡೆ (ಸಿಪಿಎಂಎಫ್), ಸ್ಥಳೀಯ ಪೊಲೀಸ್ ಮತ್ತು ಸರ್ವೇಕ್ಷಣ ತಂಡಗಳು 24 ತಾಸು ಕಣ್ಗಾವಲು ಇರಿಸಿವೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 7 ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯ 163 ಸೂಕ್ಷ್ಮ ಮತಗಟ್ಟೆಗಳು, ಗಡಿಭಾಗದ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಕಮಿಷನರ್, ಎಸ್ಪಿ ಪರಿಶೀಲನೆ
ಮಂಗಳವಾರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಡಿಸಿಪಿ ಅಂಶುಕುಮಾರ್ ಮತ್ತು ಎಸ್ಪಿ ಡಾ| ವಿಕ್ರಮ್ ಅಮಟೆ ಅವರು ಮಸ್ಟರಿಂಗ್ ಕೇಂದ್ರಗಳು, ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
60 ರೌಡಿಗಳ ಗಡೀಪಾರು
ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರದ 60 ರೌಡಿಗಳನ್ನು ಗಡೀಪಾರು ಮಾಡಿ ಅವರ ಮೇಲೆ ನಿಗಾ ಇಡಲಾಗಿದೆ. ಇಬ್ಬರ ಮೇಲೆ ಗೂಂಡಾ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರೌಡಿಗಳಿಗೂ ಎಚ್ಚರಿಕೆ ನೀಡ ಲಾಗಿದ್ದು ಯಾವುದೇ ಅಕ್ರಮ, ಅಹಿತಕರ ಘಟನೆಗಳು ನಡೆಯದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತಾ
ವ್ಯವಸ್ಥೆಯ ಸಮನ್ವಯತೆಗಾಗಿ ಪ್ರತೀ ಕ್ಷೇತ್ರದಲ್ಲಿ 17 ಸೆಕ್ಟರ್ಗಳನ್ನು ರಚಿಸ ಲಾಗಿದೆ. ಪಿಎಸ್ಐ, ಇನ್ಸ್ಪೆಕ್ಟರ್, ಎಸಿಪಿ ದರ್ಜೆಯ ಅಧಿಕಾರಿಗಳು ನಿರಂತರ ಗಸ್ತು ನಡೆಸಿ ನಿಗಾ ವಹಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಸತಿಗೃಹಗಳ ಪರಿಶೀಲನೆ
ಚುನಾವಣ ಅಕ್ರಮಗಳನ್ನು ತಡೆಯಲು ಮಂಗಳೂರು ಪೊಲೀಸರು ನಗರದ ವಸತಿಗೃಹಗಳನ್ನೂ ಪರಿಶೀಲಿಸಿದ್ದಾರೆ. ಮಂಗಳೂರು ಕೇಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿಗಳಿಗೆ ಪೊಲೀಸರು ಭೇಟಿ ನೀಡಿ ಮುಕ್ತ ಮತ್ತು ನಿರ್ಭಯವಾಗಿ ಮತದಾನ ಮಾಡುವ ಬಗ್ಗೆ ವಿಶ್ವಾಸ ಮೂಡಿಸಿದ್ದಾರೆ. ನಗರದ ಹಲವೆಡೆ ಮತಗಟ್ಟೆ ಪರಿಸರದಲ್ಲಿ ಪಾರ್ಕಿಂಗ್ ಮತ್ತು ನೋ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಅಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿದ್ದಾರೆ.