ಕಿಸಾನ್ ಸಮ್ಮಾನ್: ಬೆಳಗಾವಿಗೆ ಬಂಪರ್, ರಾಜ್ಯದ 53.35 ಲಕ್ಷ ರೈತರಿಗೆ 1,067 ಕೋ.ರೂ.
Team Udayavani, May 16, 2021, 6:50 AM IST
ದಾವಣಗೆರೆ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯಡಿ ಈ ಸಾಲಿನ ಮೊದಲ ಕಂತಿನ ಹಣ ಬಿಡುಗಡೆ ಯಾಗಿದ್ದು, ರಾಜ್ಯದಲ್ಲಿ ಬೆಳಗಾವಿಗೆ ದೊಡ್ಡ ಮೊತ್ತ 109 ಕೋ. ರೂ. ಲಭಿಸಿದೆ. ರಾಜ್ಯದ 30 ಜಿಲ್ಲೆಗಳ 53.35 ಲಕ್ಷ ರೈತರಿಗೆ 1,067 ಕೋ. ರೂ. ಬಿಡುಗಡೆಯಾಗಿದೆ. ಇದು ಪ್ರಸಕ್ತ ಸಾಲಿನ ಎಪ್ರಿಲ್, ಮೇ, ಜೂನ್ ಮತ್ತು ಜುಲೈ -ಈ ನಾಲ್ಕು ತಿಂಗಳುಗಳಿಗೆ ಸೇರಿದ ಮೊದಲ ಕಂತಿನ ನಿಧಿಯಾಗಿದ್ದು, ತಲಾ 2 ಸಾವಿರ ರೂ. ರೈತರ ಖಾತೆಗೆ ಜಮಾ ಆಗುತ್ತದೆ.
ಬೆಳಗಾವಿಗೆ ಬಂಪರ್
ಬಿಡುಗಡೆಯಾದ ಅನುದಾನದಲ್ಲಿ ಬೆಳಗಾವಿ ಜಿಲ್ಲೆಯ 5.49 ಲಕ್ಷ ರೈತರು 109 ಕೋ. ರೂ.ಗಳನ್ನು ಪಡೆದುಕೊಂಡಿದ್ದಾರೆ. ಅತೀ ಕಡಿಮೆ, ಅಂದರೆ 6.26 ಕೋ. ರೂ.ಗಳು ಬೆಂಗಳೂರು ನಗರ ಜಿಲ್ಲೆಯ ರೈತರಿಗೆ ದೊರೆತಿದೆ. ಕಲಬುರಗಿ ಮತ್ತು ಮಂಡ್ಯ 2, 3ನೇ ಸ್ಥಾನಗಳಲ್ಲಿವೆ. ಕಲಬುರಗಿಯ 2,68,863 ರೈತರಿಗೆ 53.77 ಕೋ.ರೂ. ಮತ್ತು ಮಂಡ್ಯದ 2,65,572 ರೈತರಿಗೆ 53.11 ಕೋ. ರೂ. ಬಿಡುಗಡೆಯಾಗಿದೆ.
ಕರಾವಳಿ ಜಿಲ್ಲೆಗಳು, ಕೊಡಗಿಗೆ ಎಷ್ಟು ?
ದಕ್ಷಿಣಕನ್ನಡದ 1,48,241 ರೈತರಿಗೆ 29.64 ಕೋ.ರೂ., ಉಡುಪಿಯ 1,51,133 ರೈತರಿಗೆ 30.22 ಕೋ. ರೂ., ಕೊಡಗಿನ 45,709 ರೈತರಿಗೆ 9.14 ಕೋ. ರೂ. ಲಭಿಸಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರ ಖಾತೆಗೆ ಜಮೆ ಆಗುತ್ತದೆ. ಒಂದೆರಡು ದಿನಗಳಲ್ಲಿ ಪೂರ್ಣವಾಗಿ ಎಲ್ಲರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಆಧಾರ್ ಜೋಡಣೆ ಮೂಲಕ ರಾಜ್ಯದ ಅತೀ ಹೆಚ್ಚು ರೈತರು ಸೌಲಭ್ಯ ಪಡೆದಿದ್ದಾರೆ.
– ಶ್ರೀನಿವಾಸ್ ಚಿಂತಾಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದಾವಣಗೆರೆ