ಕೃಷಿ ಚಟುವಟಿಕೆಗಳಿಗೆ ಸಾಲ ಉತ್ತೇಜನ
ಹಳೆ ಪಹಣಿ ಪತ್ರ ಆಧಾರದಲ್ಲಿ ಸಾಲ; ನಾಲ್ಕು ಲಕ್ಷ ಹೊಸ ರೈತರಿಗೆ ಪ್ರಯೋಜನ
Team Udayavani, May 3, 2020, 6:10 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಕೋವಿಡ್-19 ಮಹಾಮಾರಿ ಯಿಂದಾಗಿ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದರೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ನಾಲ್ಕು ಲಕ್ಷ ಹೊಸ ರೈತರಿಗೆ ಸಾಲ ಒದಗಿಸುವ ಮೂಲಕ ಇದಕ್ಕೆ ಉತ್ತೇಜನ ನೀಡಲು ಸಹಕಾರ ಇಲಾಖೆ ನಿರ್ಧರಿಸಿದೆ.
ಹಳ್ಳಿಗಳಿಗೆ ಮರಳಿದ ಯುವಕರು ಮತ್ತು ಕಾರ್ಮಿಕರು ಕೃಷಿ ಚಟುವಟಿಕೆಗಳನ್ನು ನಡೆಸಲಿರುವು ದರಿಂದ ಈ ವರ್ಷ ಕೃಷಿ ಸಾಗುವಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಹಕಾರ ಇಲಾಖೆ ಅಂದಾಜಿಸಿದೆ. ಸಾಮಾನ್ಯವಾಗಿ ಪ್ರತೀ ವರ್ಷ ಎಪ್ರಿಲ್ ವೇಳೆಗೆ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುತ್ತಿದ್ದರೆ ಈ ವರ್ಷ ಇದು 16 ಸಾವಿರ ಹೆಕ್ಟೇರ್ಗೆ ಹೆಚ್ಚಿರುವುದು ಇದಕ್ಕೆ ಸಾಕ್ಷಿ.
ಈಗಾಗಲೇ ಸ್ವಂತ ಊರು ಸೇರಿಕೊಂಡಿರುವ ಕನಿಷ್ಠ ಶೇ.25 ಮಂದಿ ಕೋವಿಡ್-19 ಅಬ್ಬರ ನಿಂತ ಮೇಲೆ ಮತ್ತೆ ಮಹಾನಗರಗಳಿಗೆ ತೆರಳುವುದು ಅನುಮಾನ ಎಂದು ಸಹಕಾರ ಇಲಾಖೆ ಅಂದಾಜಿಸಿದೆ.
ಕೃಷಿ ಚಟುವಟಿಕೆಗಳಿಗೆ ಸಹಾಯ
ಹಳ್ಳಿಗೆ ಮರಳಿರುವವರು ಕೃಷಿ ಜತೆಗೆ ಉಪ ಕಸುಬುಗಳನ್ನು ಕೈಗೊಳ್ಳಬಹುದು. ಈ ಉಪ ವ್ಯವಹಾರ ಮಾಡುವ ವಾಹನ ಖರೀದಿಸಲು ಅವಕಾಶ ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಈ ವರ್ಷ ಕನಿಷ್ಟ ನಾಲ್ಕು ಲಕ್ಷ ಹೊಸ ರೈತರಿಗೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ನಬಾರ್ಡ್ನಿಂದ ಸರಕಾರ ಹೆಚ್ಚುವರಿಯಾಗಿ 1,500 ಕೋ.ರೂ. ಸಾಲ ಪಡೆದಿದೆ.
ಸಭೆ ನಡೆಸದೆ ತೀರ್ಮಾನ
ಗ್ರಾಮೀಣ ಪ್ರದೇಶದ ಪ್ರಾಥಮಿಕ
ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ, ಪಿಕಾರ್ಡ್, ಲ್ಯಾಂಪ್ಸ್ ಮುಂತಾದ ಸಹಕಾರಿ ಬ್ಯಾಂಕ್ಗಳಿಂದ ಹಳೆಯ ಪಹಣಿ ಪತ್ರವನ್ನೇ ಆಧರಿಸಿ ಸಾಲ ನೀಡುವಂತೆ ಸೂಚಿಸಲಾಗಿದೆ. ಆಡಳಿತ ಮಂಡಳಿ ಸಭೆ ಸೇರಲು ಅವಕಾಶ ಇಲ್ಲದ್ದ ರಿಂದ ಸಭೆ ಸೇರದೆ ತೀರ್ಮಾನ ತೆಗೆದುಕೊಂಡು ನಿಗದಿತ ಸಮಯದಲ್ಲಿ ಸಾಲ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ನಗರದಿಂದ ಜನರು ಹಳ್ಳಿಗಳಿಗೆ ತೆರಳಿರುವುದರಿಂದ ಕೃಷಿ ಮತ್ತು ಕೃಷಿಪೂರಕ ಚಟುವಟಿಕೆ ಹೆಚ್ಚುವ ಅಂದಾಜು ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಕೃಷಿ ಸಾಲ ನೀಡಲು ತೀರ್ಮಾನಿಸಲಾಗಿದೆ.
-ಆರ್.ಶಿವಪ್ರಕಾಶ್,
ಸಹಕಾರ ಸಂಘಗಳ ಅಪರ ನಿಬಂಧಕರು
- ಶಂಕರ ಪಾಗೋಜಿ