ನಾಟಕ ರಂಗದ ದೈತ್ಯ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ
ಮರೆಯಾದ ಕಲಾ ಗಜಸಿಂಹ, ನಟ ರತ್ನಾಕರ
Team Udayavani, May 2, 2019, 10:43 AM IST
ಬೆಂಗಳೂರು : ಹಿರಿಯ ನಟ, ನಾಟಕ ರಂಗದ ದೈತ್ಯ ಪ್ರತಿಭೆ ಕನ್ನಡ ನಾಡು ಕಂಡ ಪ್ರಸಿದ್ಧ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯ ಅವರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಮತ್ತು ಐವರು ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯ ಅವರು ಅಗಲಿದ್ದಾರೆ.
ಬನಶಂಕರಿಯಲ್ಲಿರುವ ನಿವಾಸಕ್ಕೆ ಅವರ ಪಾರ್ಥೀವ ಶರೀರವನ್ನು ತರಲಾಗುತ್ತಿದೆ.
1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಕಲ್ಚರ್ಡ್ ಕಾಮೆಡಿನ್ ಎನಿಸಿಕೊಂಡಿದ್ದ ಹಿರಣ್ಣಯ್ಯ ಮತ್ತು ಶಾರಾದಮ್ಮ ದಂಪತಿಗಳ ಮಗನಾಗಿ ಜನಿಸಿದ ಮಾಸ್ಟರ್ ಹಿರಣ್ಣಯ್ಯ ಅವರ ಮೂಲಕ ಹೆಸರು ನರಸಿಂಹಮೂರ್ತಿ. ತಂದೆಯಿಂದ ರಕ್ತಗತವಾಗಿ ಕಲೆ ಮೈಗೂಡಿಸಿಕೊಂಡ ಮಾಸ್ಟರ್ ಹಿರಣ್ಣಯ್ಯ ತನ್ನ ಕಲಾ ಪ್ರತಿಭೆಯನ್ನು ನಾಡಿನಾದ್ಯಂತ ಬೆಳಗಿ ಪ್ರಖ್ಯಾತರಾದವರು. ಹಲವು ಕನ್ನಡ ಚಿತ್ರಗಳಲ್ಲಿಯೂ ಮನೋಜ್ಞ ಅಭಿನಯವನ್ನುನೀಡಿದ್ದಾರೆ.
ಲಂಚಾವತಾರ, ಮಕ್ಮಲ್ ಟೋಪಿ, ಸದಾರಮೆ ಮೊದಲಾದ ನಾಟಕಗಳು ಕರ್ನಾಟಕದಲ್ಲಿ ಮನೆಮಾತಾಗಿದೆ.
ತಂದೆಯವರ ಹಿರಣ್ಣಯ್ಯ ಮಿತ್ರಮಂಡಳಿಯನ್ನು ಮುಂದುವರಿಸಿ ಸಾವಿರಾರು ಕಡೆಗಳಲ್ಲಿ ಪ್ರದರ್ಶನ ನೀಡಿದ ಹಿರಿಮೆ ಮಾಸ್ಟರ್ ಹಿರಣ್ಣಯ್ಯ ಅವರದ್ದು.
ಸಮಾಜದ ಅಂಕು ಡೊಂಕುಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರು ಯಾವ ರಾಜಕಾರಣಿಯನ್ನು ಟೀಕಿಸಲು ಹಿಂಜರಿದವರಲ್ಲ.
ರಾಜಕಾರಣಿ ಗಳ ಬಗ್ಗೆ ವೇದಿಕೆಯಲ್ಲಿ ಟೀಕಿಸಿ ಕೇಸುಗಳನ್ನುಮೈಮೇಲೆ ಎಳೆದುಕೊಂಡಿದ್ದ ಗಟ್ಟಿಗ ಹಿರಣ್ಣಯ್ಯ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿ ನ್ಯಾಯ ಪಡೆದವರು.
ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿಶ್ವಾದ್ಯಂತ ಸಾವಿರಾರು ಸನ್ಮಾನಗಳನ್ನು ಹಿರಣ್ಣಯ್ಯ ಅವರು ಪಡೆದಿದ್ದಾರೆ.
ನಡುಬೀದಿ ನಾರಾಯಣ, ಪಶ್ಚಾತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ , ಎಚ್ಚಮ ನಾಯಕ ಮೊದಲಾದವು ಜನಮನಗೆದ್ದು ಇಂದಿಗೂ ನೆನಪಿನಲ್ಲುಳಿದ ನಾಟಕಗಳು.