ಕ್ರಿಕೆಟ್ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ
Team Udayavani, May 15, 2021, 12:35 AM IST
ಮುಂಬಯಿ : ಕ್ರಿಕೆಟ್ ಬಿಡುವಿನ ವೇಳೆ ಗೋವಾದತ್ತ ಕಾರಿನಲ್ಲಿ ಟೂರ್ ಹೊರಟಿದ್ದ ಆರಂಭಕಾರ ಪೃಥ್ವಿ ಶಾ ಅವರನ್ನು ಪೊಲೀಸರು ತಡೆದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ದ್ವಿತೀಯ ಅಲೆ ಗಂಭೀರ ಮಟ್ಟದಲ್ಲಿರುವ ಕಾರಣ ಲಾಕ್ಡೌನ್ ಹೇರಲಾಗಿದೆ. ರಾಜ್ಯದೊಳಗೂ ಜನರು ಸಕಾರಣವಿಲ್ಲದೆ ತಿರುಗುವಂತಿಲ್ಲ. ಹೊರ ರಾಜ್ಯಕ್ಕೆ ತೆರಳಬೇಕಾದರೆ ಸ್ಥಳೀಯ ಆಡಳಿತದಿಂದ ಇ-ಪಾಸ್ ಪಡೆಯಬೇಕಾದುದು ಅಗತ್ಯ.
ಇಂಥ ಪರಿಸ್ಥಿತಿಯಲ್ಲಿ ರಜಾ ದಿನಗಳನ್ನು ಕಳೆಯಲು ಕೊಲ್ಹಾಪುರ ಮಾರ್ಗವಾಗಿ ಗೋವಾದತ್ತ ಪ್ರಯಾಣ ಬೆಳೆಸಿದ ಪೃಥ್ವಿ ಶಾ ಅವರನ್ನು ಸಿಂಧುದುರ್ಗ ಜಿಲ್ಲೆಯ ಅಂಬೋಲಿಯಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅವರ ಬಳಿ ಪಾಸ್ ಕೇಳಿದ್ದಾರೆ. ಆದರೆ ಶಾ ಬಳಿ ಪಾಸ್ ಇರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟಿಗನಾದರೂ ಅವರಿಗೆ ಯಾವುದೇ ರಿಯಾಯಿತಿ ತೋರದ ಪೊಲೀಸರು ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಇದನ್ನೂ ಓದಿ :ವೃದ್ಧಿಮಾನ್ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್; ಮೈಕಲ್ ಹಸ್ಸಿ ಫಲಿತಾಂಶ ನೆಗೆಟಿವ್
ಅಲ್ಲಿಂದಲೇ ಪಾಸ್ಗೆ ಅರ್ಜಿ
ಕೊನೆಗೆ ಪೃಥ್ವಿ ಶಾ ಮೊಬೈಲ್ ಮೂಲಕ ಇ-ಪಾಸ್ಗೆ ಆನ್ಲೈನ್ ಅರ್ಜಿ ಸಲ್ಲಿಸಿ ಇದನ್ನು ಪಡೆಯುವಲ್ಲಿ ಯಶಸ್ವಿಯಾದರು. ಅನಂತರವೇ ಅವರಿಗೆ ಪ್ರಯಾಣ ಮುಂದುವರಿಸಲು ಪೊಲೀಸರು ಅನುಮತಿ ನೀಡಿದರು. ಈ ಎಲ್ಲ ನಿಯಮ ಹಾಗೂ ಪ್ರಕ್ರಿಯೆಯಿಂದಾಗಿ ಪೃಥ್ವಿ ಶಾ ಪ್ರಯಾಣ ಒಂದು ಗಂಟೆಯಷ್ಟು ವಿಳಂಬಗೊಂಡಿತು.