Sanatana: ನೀವು ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ: ಉದಯನಿಧಿಗೆ ಸುಪ್ರೀಂ
ನೀವೊಬ್ಬ ಸಚಿವರು, ಸಾಮಾನ್ಯ ವ್ಯಕ್ತಿಯಲ್ಲ ಎಂದು ಸುಪ್ರೀಂಕೋರ್ಟ್ ಚಾಟಿ
Team Udayavani, Mar 4, 2024, 3:21 PM IST
ನವದೆಹಲಿ: ಸನಾತನ ಧರ್ಮದ ಕುರಿತು ಡಿಎಂಕೆ ಮುಖಂಡ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ್ದ ವಿವಾದಾತ್ಮಕ ಹೇಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ (ಮಾರ್ಚ್ 04) ಛೀಮಾರಿ ಹಾಕಿದ್ದು, ನೀವು ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Loksabha Polls; ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಪಟ್ಟಿ ಅಂತಿಮ: ಯಡಿಯೂರಪ್ಪ
ತನ್ನ ಹೇಳಿಕೆಯ ವಿರುದ್ಧ ದಾಖಲಾಗಿದ್ದ ಎಲ್ಲಾ ಎಫ್ ಐಆರ್ ಗಳನ್ನು ಒಟ್ಟಾಗಿ ವಿಚಾರಣೆ ನಡೆಸುವಂತೆ ಕೋರಿ ಉದಯನಿಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೀಠ ನಡೆಸಿತು.
ನೀವು ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ.. ನೀವು ಏನು ಹೇಳಿದ್ದೀರಿ ಎಂಬುದು ನಿಮಗೆ ತಿಳಿದಿದೆ. ನಿಮಗೆ ಪರಿಸ್ಥಿತಿಯ ಬಗ್ಗೆ ತಿಳಿದಿರಬೇಕು. ನೀವೊಬ್ಬ ಸಚಿವರು, ಸಾಮಾನ್ಯ ವ್ಯಕ್ತಿಯಲ್ಲ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಉದಯನಿಧಿ ಸ್ಟಾನಿಲ್ ಪರವಾಗಿ ಹಿರಿಯ ವಕೀಲ, ಕಾಂಗ್ರಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ವಿವಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಸಿಂಘ್ವಿ ಅರ್ನಾಬ್ ಗೋಸಾಮಿ, ಮೊಹಮ್ಮದ್ ಜುಬೈರ್ ಸೇರಿದಂತೆ ಇತರರ ವಿರುದ್ಧದ ದಾಖಲಾದ ಎಫ್ ಐಆರ್ ಗಳನ್ನು ಸೇರಿಸಲು ಮನವಿ ಮಾಡಿಕೊಂಡರು.
ವಾದ ಆಲಿಸಿದ ಸುಪ್ರೀಂಕೋರ್ಟ್, ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರುವಂತೆ ಸೂಚನೆ ನೀಡಿತು. 2023ರ ಸೆಪ್ಟೆಂಬರ್ ನಲ್ಲಿ ನಡೆದ ಸಮಾರಂಭದಲ್ಲಿ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ನಾಶಗೊಳಿಸಬೇಕು. ಸನಾತನ ಧರ್ಮ ಕೋವಿಡ್ ಮತ್ತು ಮಲೇರಿಯಾ ಇದ್ದಂತೆ ಎಂದು ಆರೋಪಿಸಿದ್ದರು.