ಪಠ್ಯಕ್ಕೆ ಕೊಕ್…ನ್ಯೂಟನ್ ನ 3ನೇ ನಿಯಮ ಉಲ್ಲೇಖಿಸಿ ʼಕೈʼ ಗೆ ಸಾವರ್ಕರ್ ಮೊಮ್ಮಗ ತಿರುಗೇಟು!
ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್ ಕುರಿತು ಬೇಕಾದಷ್ಟು ಲೇಖನಗಳು ಲಭ್ಯವಿದೆ.
Team Udayavani, Jun 17, 2023, 2:58 PM IST
ಪಣಜಿ: ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವೀರ ಸಾವರ್ಕರ್ ಅವರ ಕುರಿತ ಪಠ್ಯವನ್ನು ತೆಗೆದುಹಾಕಲು ನಿರ್ಧರಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್, ಇದು ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:‘ದೇವರ ಆಟ ಬಲ್ಲವರಾರು…’; 30 ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಪ್ಲ್ರಾನ್
ಪಿಟಿಐ ಜತೆ ಮಾತನಾಡಿರುವ ರಂಜಿತ್ ಸಾವರ್ಕರ್ ಅವರು, ವೀರ ಸಾವರ್ಕರ್ ಕುರಿತ ಅಧ್ಯಾಯವನ್ನು ತೆಗೆದುಹಾಕುವ ಮೂಲಕ ಸಾವರ್ಕರ್ ಬಗ್ಗೆ ಕಲಿಯುವ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಳ್ಳಬಹುದೆಂದು ಕಾಂಗ್ರೆಸ್ ಭಾವಿಸಿದಂತಿದೆ. ಆದರೆ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರು ಎಂದು ತಿರುಗೇಟು ನೀಡಿದ್ದಾರೆ.
“ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್ ಕುರಿತು ಬೇಕಾದಷ್ಟು ಲೇಖನಗಳು ಲಭ್ಯವಿದೆ. ಅಷ್ಟೇ ಅಲ್ಲ ಸಾವರ್ಕರ್ ಸ್ಮಾರಕ ಅವರ ಸಾಹಿತ್ಯವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅದನ್ನು ನಾವು ಕನ್ನಡದಲ್ಲಿಯೂ ಪ್ರಕಟಿಸುತ್ತಿದ್ದೇವೆ ಎಂದು ರಂಜಿತ್ ಸಾವರ್ಕರ್ ತಿಳಿಸಿದ್ದಾರೆ.
ರಂಜಿತ್ ಸಾವರ್ಕರ್
ಪಠ್ಯ ಪುಸ್ತಕದಿಂದ ಸಾವರ್ಕರ್ ಅವರ ಅಧ್ಯಾಯವನ್ನು ತೆಗೆದುಹಾಕಿದ ಕೂಡಲೇ ಎಲ್ಲಾ ಮಾಹಿತಿಯನ್ನು ತೆಗೆದುಹಾಕಿದಂತಾಗುವುದಿಲ್ಲ. ಒಂದು ವೇಳೆ ನೀವು ಸಾವರ್ಕರ್ ಬಗ್ಗೆ ಹೆಚ್ಚು, ಹೆಚ್ಚು ಮರೆಮಾಚಿದಷ್ಟು, ಅದು ಇನ್ನಷ್ಟು ಪ್ರಚಲಿತಕ್ಕೆ ಬರುತ್ತದೆ. ಇದೊಂದು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ ಎಂದು ರಂಜಿತ್ ನ್ಯೂಟನ್ಸ್ ನ ಮೂರನೇ ನಿಯಮವನ್ನು(ನ್ಯೂಟನ್ 3ನೇ ನಿಯಮದಲ್ಲಿ ಪ್ರತಿಯೊಂದು ಕ್ರಿಯೆಗೆ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದಾಗಿದೆ) ಉಲ್ಲೇಖಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ 6ನೇ ಮತ್ತು 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯದಲ್ಲಿರುವ ವೀರ ಸಾವರ್ಕರ್ ಮತ್ತು ಕೆಬಿ ಹೆಡ್ಗೇವಾರ್ ಅವರ ಅಧ್ಯಾಯವನ್ನು ಪರಿಷ್ಕರಿಸಲು ಅನುಮತಿ ನೀಡಿತ್ತು.ಇದಕ್ಕೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.