ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ
Team Udayavani, Jul 7, 2022, 11:53 AM IST
ಬೆಂಗಳೂರು: ಉದ್ಯಮಿಯೊಬ್ಬರ ವೃದ್ಧ ತಾಯಿ ಯ ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದ ನೇಪಾಳ ದಂಪತಿ ಸೇರಿ ಮೂವರು ಜೆ.ಬಿ.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೀವನ್ ಭೀಮಾನಗರ ನಿವಾಸಿ ಪ್ರಕಾಶ್ ಸಿಂಗ್ (41), ಆತನ ಪತ್ನಿ ಸಂಗೀತಾ(26) ಮತ್ತು ಸಂಬಂಧಿ ಬೀಷ್ಣು ಬಹದ್ದೂರ್ ಸಹಕಾರಿ(32) ಬಂಧಿತರು. ಆರೋಪಿಗಳಿಂದ 100 ಗ್ರಾಂ ಚಿನ್ನಾ ಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಪ್ರಕಾಶ್ ಸಿಂಗ್ ಮತ್ತು ಆತನ ಪತ್ನಿ ಸಂಗೀತಾ ಕೆಲ ತಿಂಗಳ ಹಿಂದೆ ದೂರುದಾರ ವಿನೋದ್ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಜೂನ್ 29ರಂದು ವಿನೋದ್ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಅವರ ಪತ್ನಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ವಿನೋದ್ ತಂದೆ ಅಂಗಡಿಗೆ ತೆರಳಿದ್ದರು. ಆಗ ಮನೆಯಲ್ಲಿ ಅವರ ತಾಯಿ ಮಂಜುಳಾ (61) ಒಬ್ಬರೇ ಇದ್ದರು. ಈ ವೇಳೆ ಪ್ರಕಾಶ್ ಸಿಂಗ್, ಆತನ ಪತ್ನಿ ಸಂಗೀತಾ ಬೀಷ್ಣು ಬಹದ್ದೂರ್ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಮಂಜುಳಾರ ಕೈ-ಕಾಲು ಕಟ್ಟಿ ಹಾಕಿ ಬೀರುವಿನ ಕೀ ಕಸಿದುಕೊಂಡು 10 ಲಕ್ಷ ರೂ. ನಗದು, ನಾಲ್ಕು ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಕೃತ್ಯ ಎಸಗಿದ ಬಳಿಕ ಆರೋ ಪಿಗಳು ನೇಪಾಳಕ್ಕೆ ಹೋಗಿದ್ದರು. ಈ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.