ನಿಧಿಗಾಗಿ ವ್ಯಾಸರಾಜ ವೃಂದಾವನವೇ ಧ್ವಂಸ
Team Udayavani, Jul 19, 2019, 5:23 AM IST
ಗಂಗಾವತಿ: ಕೊಪ್ಪಳ ಜಿಲ್ಲೆ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿರುವ ಐದು ಶತಮಾನಗಳಷ್ಟು ಪುರಾತನ ವ್ಯಾಸರಾಜ(ರಾಯ)ರ ವೃಂದಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ನಿಧಿಗಾಗಿ ಶೋಧ ಮಾಡಿದ ಘಟನೆ ಬುಧವಾರ ರಾತ್ರಿ ಜರುಗಿದೆ. ಇದರಿಂದ ವಿಚಲಿತರಾದ ಸಾವಿರಾರು ಭಕ್ತರು ಸ್ಥಳಕ್ಕೆ ದೌಡಾಯಿಸಿ ನವವೃಂದಾವನ ಸ್ವಚ್ಛಗೊಳಿಸಿದರು. ಮಂತ್ರಾಲಯ ಮಠ, ಉತ್ತಾರಾದಿಮಠ ಹಾಗೂ ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಾಧೀಶರು ಮತ್ತು ಭಕ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.
ನವವೃಂದಾವನ ಗಡ್ಡಿಯಲ್ಲಿ ಒಂಬತ್ತು ಯತಿಗಳ ವೃಂದಾವನಗಳಿದ್ದು, ಆಂಜನೇಯ ಸ್ವಾಮಿ ದೇವಾಲಯದ ಎದುರು ವ್ಯಾಸರಾಜರ ವೃಂದಾವನವಿತ್ತು. ಅದರ ಮುಂದಿನ ಕಲ್ಲಿನ ಮಂಟಪ ಹಾಗೂ ವೃಂದಾವನ ಮೇಲಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸುಮಾರು 2-3 ಅಡಿ ನೆಲ ಅಗೆದು ನಿಧಿಗಾಗಿ ಶೋಧ ನಡೆಸಲಾಗಿದೆ. 480 ವರ್ಷಗಳ ಹಿಂದೆ ನಿರ್ಮಿಸಿದ್ದ ವೃಂದಾವನ ಹಾಗೂ ಕಲ್ಲುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿರುವುದು ಭಕ್ತರಲ್ಲಿ ತೀವ್ರ ನೋವನ್ನುಂಟು ಮಾಡಿದೆ.
ಧ್ವಂಸಕ್ಕೂ ಮುನ್ನ ಪೂಜೆ?:ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆ. ರಾತ್ರಿ ಪೂಜೆ ಮಾಡಿದ್ದರಿಂದ ಬೆಳಗ್ಗೆ ತೆರಳಿದ ಭಕ್ತರಿಗೆ ಪೂಜೆ ಮಾಡಿದ ಸಾಮಾನುಗಳು ಕಂಡು ಬಂದಿವೆ.
ಸ್ವಚ್ಛಗೊಳಿಸಿದ ಭಕ್ತರು: ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾದ ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ಆಗಮಿಸಿ ಎಲ್ಲೆಂದರಲ್ಲಿ ಬಿದ್ದಿದ್ದ ಕಲ್ಲು, ಮಣ್ಣು ಸ್ವಚ್ಛಗೊಳಿಸಿದರು. ಈ ಸಂದರ್ಭ ಸ್ವಯಂ ಮೂರು ಮಠದ ಪೂಜ್ಯರು ಶ್ರಮಾನುಭವದಲ್ಲಿ ಭಕ್ತರ ಜತೆ ಸೇರಿ ಕೆಲಸ ಮಾಡಿದರು. ಅಲ್ಲದೇ, ಮೂರು ಮಠಗಳ ಭಕ್ತರು ಸೇರಿ ಪುನರ್ ನಿರ್ಮಾಣ ಮಾಡುವುದಾಗಿ ಮಂತ್ರಾಲಯ ಶ್ರೀಗಳು ಘೋಷಿಸಿದರು. ಭಕ್ತರು ಯಾವುದೇ ಭಾವೋದ್ವೇಗಕ್ಕೆ ಒಳಗಾಗದಂತೆ ಮನವಿ ಮಾಡಿದರು.
ವೃಂದಾವನ ಸೇರಿ ಆನೆಗೊಂದಿ ಸುತ್ತಲಿನ ಐತಿಹಾಸಿಕ ಸ್ಮಾರಕಗಳಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪುರಾತತ್ವ ಇಲಾಖೆ, ಕೊಪ್ಪಳ, ಬಳ್ಳಾರಿ ಜಿಲ್ಲಾಡಳಿತಗಳು ಭದ್ರತೆ ನೀಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಮೇಲಿಂದ ಮೇಲೆ ಸ್ಮಾರಕಗಳನ್ನು ನಿಧಿಗಳ್ಳರು ಧ್ವಂಸಗೊಳಿಸುತ್ತಿದ್ದಾರೆ.