ಶಾಸಕರಿಗೆ ವಿಪ್: ಕಾನೂನು ತಜ್ಞರು ಏನನ್ನುತ್ತಾರೆ?
Team Udayavani, Jul 18, 2019, 6:00 AM IST
ಬೆಂಗಳೂರು: ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಆಯಾ ಪಕ್ಷಗಳು ವಿಪ್ ಜಾರಿಗೊಳಿಸಿದರೆ ಏನಾಗಬಹುದು ಎಂಬ ಜಿಜ್ಞಾಸೆ ಆರಂಭವಾಗಿದೆ.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಪಾಲ್ಗೊಳ್ಳುವ ಬಗ್ಗೆ ರಾಜೀನಾಮೆ ಸಲ್ಲಿಸಿದ 15 ಮಂದಿ ಶಾಸಕರಿಗೆ “ಯಾರೂ ಬಲವಂತ’ ಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದಾಗ ವಿಪ್ ಜಾರಿ ಮಾಡಿದರೆ ಅದು ಸುಪ್ರೀಂ ಕೋರ್ಟ್ನ ಆದೇಶಕ್ಕೆ ಅಗೌರವ ತೋರಿದಂತೆ ಹಾಗೂ ನ್ಯಾಯಾಂಗ ನಿಂದನೆಯೂ ಆಗಬಹುದು. ವಿಪ್ ಪಕ್ಷಕ್ಕೆ ಸಂಬಂಧಿಸಿದ ವಿಚಾರ, ಸುಪ್ರೀಂ ಆದೇಶ ಇದಕ್ಕೆ ಅನ್ವಯವಾಗಲ್ಲ ಅನ್ನುವ ವಾದ ಸರಿಯಲ್ಲ. ಸಂವಿಧಾನದ ಪರಿಚ್ಛೇದ 141ರ ಪ್ರಕಾರ ಸುಪ್ರೀಂ ಕೋರ್ಟ್ ಆದೇಶ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಹೇಳಿದ್ದಾರೆ.
ವಿಪ್ ಬಗ್ಗೆ ಹೇಳಿಲ್ಲ ಎನ್ನುವಂತಿಲ್ಲ
ಸುಪ್ರಿಂ ಕೋರ್ಟ್ ತೀರ್ಪನ್ನು ತೀರಾ ತಾಂತ್ರಿಕವಾಗಿ ನೋಡದೆ ಸಂದರ್ಭಕ್ಕನುಗುಣವಾಗಿ ನೋಡ ಬೇಕು. 15 ಮಂದಿ ಶಾಸಕರು ಕೋರ್ಟ್ಗೆ ಹೋಗಿದ್ದು “ನಮ್ಮ ರಾಜೀನಾಮೆ ಅಂಗೀಕರಿಸದೆ ವಿಪ್ ನೀಡಿ ಅಧಿವೇಶನಕ್ಕೆ ಬರುವಂತೆ ಬಲವಂತ ಪಡಿಸಲಾಗುತ್ತಿದೆ’ ಎಂದು. ಸುಪ್ರೀಂ ಆದೇಶ ದಲ್ಲಿ ವಿಪ್ ಬಗ್ಗೆ ಹೇಳಿಲ್ಲ ಎಂಬ ವಾದ ಸಮಂಜಸವಲ್ಲ. ಶಾಸಕರನ್ನು ಬಲವಂತಪಡಿಸುವ ಅಧಿಕಾರ ಮತ್ತು ಅವಕಾಶ ಇರುವುದು ಅವರು ಗೆದ್ದ ರಾಜಕೀಯ ಪಕ್ಷಕ್ಕೆ ಮಾತ್ರ. “ಯಾರೂ ಬಲವಂತ ಪಡಿಸಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಪಕ್ಷಗಳಿಗೂ ಅನ್ವಯವಾಗುತ್ತದೆ. ಅಷ್ಟಕ್ಕೂ ಮುಖ್ಯಮಂತ್ರಿ ಸಹ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದರು ಅನ್ನುವುದು ಗಮನಿಸ ಬೇಕು ಎಂದು ಮತ್ತೂಬ್ಬ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅಭಿ ಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಶಾಸಕರಿಗೂ ವಿಪ್
ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದೆ. ಶಾಸಕಾಂಗ ಪಕ್ಷದ ಅಧ್ಯಕ್ಷರೂ ಆಗಿರುವ ಸಿಎಂ ಕುಮಾರಸ್ವಾಮಿ ಅವರೇ ವಿಪ್ ಜಾರಿ ಮಾಡಿದ್ದಾರೆ. ಒಂದು ವೇಳೆ ಗೈರುಹಾಜರಾದಲ್ಲಿ ಅಥವಾ ಮತ ಚಲಾವಣೆ ಮಾಡದೇ ಇದ್ದಲ್ಲಿ ಅಥವಾ ವಿಪ್ ಉಲ್ಲಂಘನೆ ಮಾಡಿ ಮತ ಚಲಾವಣೆ ಮಾಡಿದ್ದೇ ಆದಲ್ಲಿ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ನಿಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕಾಂಗ್ರೆಸ್ನಲ್ಲೇ “ಭಿನ್ನ’ ರಾಗ
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾಂಗ್ರೆಸ್ನಲ್ಲೇ ಭಿನ್ನ ಅಭಿಪ್ರಾಯಗಳು ತಲೆದೋರಿವೆ. ಕೋರ್ಟ್ನಲ್ಲಿ ವಾದ ಮಂಡಿಸಿದ, ಅಭಿಷೇಕ್ ಮನು ಸಿಂ Ì, ತಮ್ಮ ಶೇ.90ರಷ್ಟು ವಾದಕ್ಕೆ ಮನ್ನಣೆ ಸಿಕ್ಕಿದೆ ಎಂದಿದ್ದಾರೆ. ಜತೆಗೆ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಭ್ರಮಕ್ಕೆ ಕಾರಣಗಳೇನು ಎಂಬುದೇ ಅರ್ಥವಾಗುತ್ತಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ. ಆದರೆ ಕಾಂಗ್ರೆಸ್ನ ಮತ್ತೂಬ್ಬ ವಕ್ತಾರ ರಣದೀಪ್ ಸುಜೇìವಾಲ, ಸುಪ್ರೀಂ ಕೋರ್ಟ್ ವಿಪ್ನ ಮಹತ್ವವನ್ನೇ ಕಡಿಮೆ ಮಾಡಿದ್ದು, ಈ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿರುವ ಜನಪ್ರತಿನಿಧಿಗಳನ್ನು ಶಿಕ್ಷಿಸದಂತೆ ಮಾಡಿದೆ ಎಂದು ಹೇಳಿದ್ದಾರೆ.