ವರ್ಷಾಂತ್ಯವರೆಗೂ ಸೋಂಕು ; ವೈರಸ್ನೊಂದಿಗೆ ಚೆಸ್, ಗೆಲುವು ಯಾರಿಗೆ: ಡಾ| ಗುಲೇರಿಯಾ
Team Udayavani, Apr 21, 2021, 7:30 AM IST
ಹೊಸದಿಲ್ಲಿ: ಸದ್ಯಕ್ಕೆ ಭಾರೀ ಸಾವು-ನೋವುಗಳಿಗೆ ಕಾರಣವಾಗುತ್ತಿರುವ ಕೊರೊನಾ ಸೋಂಕು ಈ ವರ್ಷದ ಅಂತ್ಯದಲ್ಲಿ “ಸ್ಥಿರ’ವಾಗಲಿದ್ದು, ಮುಂದಿನ ವರ್ಷದ ಮಧ್ಯಭಾಗದಲ್ಲಿ ಜಗತ್ತು “ಹಿತಕರ ವಲಯ’ವಾಗಿ ಪರಿವರ್ತಿತವಾಗಲಿದೆ. ಆತಂಕದ ನಡುವೆಯೇ ಇಂಥದ್ದೊಂದು ಸಮಾಧಾನಕರ ಸುದ್ದಿಯನ್ನು ನೀಡಿದ್ದು ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕ ಡಾ| ರಣದೀಪ್ ಗುಲೇರಿಯಾ.
“ನ್ಯೂಸ್18′ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗುಲೇರಿಯಾ, “ನಾವು ಮತ್ತು ವೈರಸ್ನ ನಡುವೆ ಚೆಸ್ ಆಟ ನಡೆಯುತ್ತಿದೆ. ನಾವು ಒಂದು ಕಾಯಿಯನ್ನು ನಡೆಸಿದರೆ, ವೈರಸ್ ಮತ್ತೂಂದು ಕಾಯಿಯ ಮೂಲಕ ಆಟವಾಡಿ, ಚಿತ್ರಣವನ್ನೇ ಬದಲಿಸುತ್ತಿದೆ. ಅಂತ್ಯದಲ್ಲಿ ಗೆಲ್ಲುವುದು ಯಾರು ನೋಡಿಯೇ ಬಿಡೋಣ’ ಎಂದಿದ್ದಾರೆ. “ವರ್ಷಾಂತ್ಯದಲ್ಲಿ ಸೋಂಕು ಸ್ಥಿರತೆಗೆ ಬರಲಿದೆ. ಇಡೀ ಸೋಂಕು ಸಮಾಪ್ತಿಯಾಗಲಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಮುಂದಿನ ವರ್ಷದ ಮಧ್ಯಭಾಗದ ವೇಳೆ ಜಗತ್ತು ಆರಾಮದಾಯಕ ಸ್ಥಿತಿಗೆ ತಲುಪಲಿದೆ. ಆದರೆ, ನಮ್ಮ ಈ ಪಯಣದಲ್ಲಿ ಎರಡು ಸಮಸ್ಯೆಗಳು ಅಡ್ಡಿಯಾಗಬಹುದು. ಅವೆಂದರೆ ಲಸಿಕೆಗಳ ಲಭ್ಯತೆ ಮತ್ತು ಕೋವಿಡ್-19 ವೈರಸ್ನ ಭಿನ್ನ ಸ್ವರೂಪಗಳ ಅರ್ಥಮಾಡಿಕೊಳ್ಳುವಿಕೆ. ಸೋಂಕಿನ ಸ್ವರೂಪಗಳು, ರೂಪಾಂತರಗಳ ಬಗ್ಗೆ ಆಳವಾದ ಅಧ್ಯಯನ ಅಗತ್ಯ. ಏಕೆಂದರೆ ಈ ಬಗ್ಗೆ ಸಮರ್ಪಕ ಮಾಹಿತಿ ದೊರೆತರೆ ಮಾತ್ರವೇ, ಭವಿಷ್ಯದಲ್ಲಿ ಸೋಂಕು ಹೇಗಿರುತ್ತದೆ ಎಂಬುದನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ’ ಎಂದಿದ್ದಾರೆ ಗುಲೇರಿಯಾ.
ಲಸಿಕೆ ಉತ್ಪಾದನೆ ಹೆಚ್ಚಿಸಿ
ದೇಶದಲ್ಲಿ ತಯಾರಾಗುತ್ತಿರುವ ಕೊರೊನಾ ಲಸಿಕೆಗಳ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ ಕೊರೊನಾ ಲಸಿಕೆ ತಯಾರಕರ ಜತೆಗೆ ವೀಡಿಯೋ ಸಂವಾದ ನಡೆಸಿದ ಅವರು, ತ್ವರಿತವಾಗಿ ಲಸಿಕೆಗಳನ್ನು ತಯಾರಿಸಿ ತುರ್ತು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಲಸಿಕೆ ತಯಾರಿಕಾ ಕಂಪೆನಿಗಳ ಕಾರ್ಯವೈಖರಿಯನ್ನು ಶ್ಲಾ ಸಿದರು. “ದೇಶದ ಲಸಿಕಾ ತಯಾರಿಖ ಕ್ಷೇತ್ರವನ್ನು ಸಮರ್ಥನಾ ಭಾವ, ಅನುಸಂಧಾನ ಹಾಗೂ ಸೇವಾ ಭಾವದ ಪ್ರತೀಕ’ ಎಂದು ಬಣ್ಣಿಸಿದ ಅವರು, ಈ 3 ಭಾವಗಳಿಂದ ಕೆಲಸ ಮಾಡಿದ್ದರಿಂದಲೇ ಭಾರತ ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಲಸಿಕೆ ಉತ್ಪಾದಿಸುವ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ ಎಂದು ಕೊಂಡಾಡಿದರು.
10 ದಿನಗಳಲ್ಲೇ ಸ್ಪುಟ್ನಿಕ್-5
ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್-5 ಮುಂದಿನ 10 ದಿನಗಳಲ್ಲೇ ಭಾರತಕ್ಕೆ ಆಗಮಿಸಲಿದ್ದು, ಮೇ ತಿಂಗಳಲ್ಲಿ ಇದರ ಉತ್ಪಾದನೆ ಆರಂಭವಾಗಲಿದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ಬಾಲಾ ವೆಂಕಟೇಶ್ ವರ್ಮಾ ತಿಳಿಸಿದ್ದಾರೆ. ಕಳೆದ ವಾರವಷ್ಟೇ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ(ಡಿಸಿಜಿಐ) ಸ್ಪುಟ್ನಿಕ್-5 ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಹಸಿರು ನಿಶಾನೆ ತೋರಿತ್ತು. ಈ ಮೂಲಕ ಸ್ಪುಟ್ನಿಕ್ಗೆ ಒಪ್ಪಿಗೆ ನೀಡಿದ 60ನೇ ರಾಷ್ಟ್ರವೆನಿಸಿತ್ತು. ಈ ತಿಂಗಳ ಅಂತ್ಯದಲ್ಲೇ ಮೊದಲ ಶಿಪ್ಮೆಂಟ್ ಭಾರತಕ್ಕೆ ಬರಲಿದ್ದು, ತಿಂಗಳಿಗೆ 5 ಕೋಟಿ ಡೋಸ್ಗಳು ತಯಾರಾಗುವ ಸಾಧ್ಯತೆಯಿದೆ ಎಂದೂ ವರ್ಮಾ ಹೇಳಿದ್ದಾರೆ.
ಲಸಿಕೆ ಪಡೆದ ಮಂದಿಗೆ ಟೊಮೆಟೋ ಉಚಿತ!
ಲಸಿಕೆ ಉತ್ಸವ ಮೂಲಕ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ಲಸಿಕೆ ಸ್ವೀಕರಿಸಲು ಮನವೊಲಿತ್ತಿರುವಂತೆಯೇ, ಛತ್ತೀಸ್ಗಢದ ನಗರಪಾಲಿಕೆಯೊಂದು ವಿನೂತನ ಆಫರ್ ಘೋಷಿಸುವ ಮೂಲಕ ಜನರನ್ನು ಲಸಿಕಾ ಕೇಂದ್ರದತ್ತ ಸೆಳೆಯುತ್ತಿದೆ. ಇಲ್ಲಿ “ಲಸಿಕೆ ಪಡೆಯುವವರಿಗೆ ಟೊಮೆಟೋ ಉಚಿತ’ ಎಂದು ಘೋಷಿಸಲಾಗಿದೆ. ಹೀಗಾಗಿ ಲಸಿಕಾ ಕೇಂದ್ರಗಳಿಗೆ ಜನರ ದಂಡೇ ಆಗಮಿಸುತ್ತಿದ್ದು, ವಾಪಸ್ ಹೋಗುವಾಗ ಟೊಮೆಟೋ ಚೀಲದೊಂದಿಗೆ ತೆರಳುತ್ತಿದ್ದಾರೆ.