ಸಿದ್ದೇಶ್ವರ ಶ್ರೀಗಳು ಲಿಂಗಾಯತ ಶ್ರೀಗಳಾದರೂ ಚಿತೆಗೆ ಅಗ್ನಿ ಸ್ಪರ್ಶ
ಜ್ಞಾನಯೋಗಾಶ್ರಮದತ್ತ ಹೊರಟಿರುವ ಲಕ್ಷಾಂತರ ಭಕ್ತರು..
Team Udayavani, Jan 2, 2023, 10:58 PM IST
ವಿಜಯಪುರ : ಸೋಮವಾರ ಸಂಜೆ ಲಿಂಗೈಕ್ಯರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗಾಯತ ಸಮಾಜದ ಅಗ್ರಗಣ್ಯ ಶ್ರೀಗಳಾದರು ಅವರ ಅಂತಿಮ ಸಂಸ್ಕಾರವನ್ನು ದೇಹವನ್ನು ಭೂಮಿಯಲ್ಲಿ ಇಡದೆ ಅಗ್ನಿ ಸ್ಪರ್ಶ ಮಾಡಲಾಗುತ್ತಿದೆ.
ತನ್ನ ಕೊನೆಯಾದ ಬಳಿಕ ಶರೀರವನ್ನು ಸಮಾಧಿ ಮಾಡದೆ, ಯಾವುದೇ ಸ್ಮಾರಕ ನಿರ್ಮಿಸದೆ ಅಗ್ನಿ ಸ್ಪರ್ಶ ಮಾಡಿ ಚಿತಾ ಭಸ್ಮವನ್ನು ಜಲಮೂಲಗಳಲ್ಲಿ ವಿಸರ್ಜಿಸಬೇಕು ಎಂದು 2014 ರಲ್ಲೇ ಶ್ರೀಗಳು ಕಾನೂನು ಬದ್ದವಾಗಿ ಬರೆದಿಟ್ಟಿದ್ದರು. ಅದೇ ರೀತಿಯಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಗುವುದು ಎಂದು ವಿವಿಧ ಶ್ರೀಗಳು ಮತ್ತು ಗಣ್ಯರು ತಿಳಿಸಿದ್ದಾರೆ.
ಆಶ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯ್ ಮಹಾಂತೇಶ್ ದಾನಮ್ಮನವರ್, ಬಸನಗೌಡ ಪಾಟೀಲ್ ಯತ್ನಾಳ್, ಎಂ.ಬಿ. ಪಾಟೀಲ್, ಐಜಿಪಿ, ಎಸ್ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು , ನೂರಾರು ಸಂಖ್ಯೆಯಲ್ಲಿ ಪೊಲೀಸರು. ಸುತ್ತೂರು ಶ್ರೀಗಳು ಸೇರಿ ಹಲವು ಮಠಾಧೀಶರು ಹಾಜರಿದ್ದಾರೆ.
ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಮಂಗಳವಾರ ವಿಜಯಪುರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ರಾತ್ರಿಯಿಂದಲೇ ಆಶ್ರಮದಲ್ಲಿ ಭಕ್ತರಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಶಾಸಕರು ಮಂಗಳವಾರ ಬೆಳಗ್ಗೆ ವಿಜಯಪುರಕ್ಕೆ ಆಗಮಿಸಿ ಅಂತಿಮ ವಿಧಿಗಳಲ್ಲಿ ಭಾಗಿಯಾಗಲಿದ್ದಾರೆ.
ಮಂಗಳವಾರ ಬೆಳಗ್ಗೆ6 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಆಶ್ರಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ವೈಕುಂಠ ಏಕಾದಶಿಯ ಪುಣ್ಯ ದಿನದಂದು ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಇಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಹೇಳಿಕೆ ನೀಡಿ ಭಾವುಕರಾದರು.
ದರ್ಶನಕ್ಕೆ ಜನಸಾಗರ
ರಾತ್ರಿಯೇ ಆಶ್ರಮದಲ್ಲಿ ಭಕ್ತಸಾಗರ ಆಗಮಿಸಿದ್ದು ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರು ಎರಡು ಗೇಟ್ ಗಳ ಮೂಲಕ ಭಕ್ತರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳಲ್ಲಿಯೂ ಟ್ರಾಫಿಕ್ ನಿಯಂತ್ರಣಕ್ಕಾಗಿ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ.