ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
Team Udayavani, Mar 8, 2023, 7:25 AM IST
ಉಡುಪಿ: ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ-ಹಂತವಾಗಿ ಲಕ್ಷಾಂತರ ರೂ. ಹಣವನ್ನು ಆರೋಪಿಗಳು ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಗಿರೀಶ್ ಆಚಾರ್ಯ ಅವರು ಹಣದ ಆವಶ್ಯಕತೆಗಾಗಿ ಫೇಸ್ಬುಕ್ನಲ್ಲಿ ಕಂಡುಬಂದ ಬಜಾಜ್ ಲೋನ್ ಎಂಬ ಜಾಹೀರಾತಿನಲ್ಲಿ ಲೋನ್ ಪಡೆಯುವ ಬಗ್ಗೆ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿದ್ದು, ಫೆ. 27ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಬಜಾಜ್ ಫೈನಾನ್ಸ್ನಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದ. ಸಾಲ ನೀಡುವ ಬಗ್ಗೆ ಶುಲ್ಕ ನೀಡುವಂತೆ ತಿಳಿಸಿ ಮಾ. 1ರಿಂದ 3ರ ನಡುವೆ ಹಂತ ಹಂತವಾಗಿ 4,09,167 ರೂ.ಗಳನ್ನು ಆರೋಪಿಗಳು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ಸಾಲವನ್ನೂ ನೀಡದೆ, ಪಡೆದ ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.